ಅಳವಂಡಿ: ಬೇರೆ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕೆ ಕ್ರೋಧಗೊಂಡ ಅಣ್ಣ ನಾಲ್ಕು ತಿಂಗಳ ಗರ್ಭಿಣಿಯಾದ ಸ್ವಂತ ತಂಗಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲ್ಲೂಕಿನ ಹಂದ್ರಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕುಕನೂರು ತಾಲ್ಲೂಕಿನ ಚಿತ್ತಾಪುರ ಗ್ರಾಮದ ಮೀನಾಕ್ಷಿ ಹಲ್ಲೆಗೊಳಗಾದ ಯುವತಿ. ಅಣ್ಣ ಮಂಜುನಾಥ ಹಲ್ಲೆ ಮಾಡಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಕುರುಬ ಜನಾಂಗಕ್ಕೆ ಸೇರಿದ ಮೀನಾಕ್ಷಿ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಉದಯ್ ಎನ್ನುವ ಯುವಕ ಕುಟುಂಬದವರ ವಿರೋಧದ ಕಾರಣಕ್ಕೆ ಓಡಿ ಹೋಗಿ ಒಂದು ವರ್ಷದ ಹಿಂದೆ ಮದುವೆ ಆಗಿ ಬೆಂಗಳೂರಿನಲ್ಲಿ ವಾಸವಿದ್ದರು. ಯುವತಿಯ ಮೈದುನನ (ಗಂಡನ ತಮ್ಮ) ಮದುವೆ ಇದ್ದ ಕಾರಣಕ್ಕಾಗಿ ಊರಿಗೆ ಬಂದಿದ್ದರು.
ಇದನ್ನು ಗಮನಿಸಿದ ಯುವತಿಯ ಅಣ್ಣ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಗಾಬರಿಗೊಂಡ ತಂಗಿ ಮದುವೆ ವೇದಿಕೆಯತ್ತ ಓಡಿ ಬಂದಿದ್ದಾಳೆ, ವೇದಿಕೆಯ ಮುಂದೆಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಹೊಡೆದಿದ್ದಾನೆ.
ಇದರಿಂದ ತೀವ್ರ ಗಾಯಗೊಂಡಿರುವ ಯುವತಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಂಗಿ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.