
ಹನುಮಸಾಗರ: ‘ಮಾರುಕಟ್ಟೆ ಮೂಲ ಸೌಕರ್ಯವಿಲ್ಲದೆ ರೈತರು ಹೈರಾಣ’ ಶೀರ್ಷಿಕೆಯಲ್ಲಿ ನ.18ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಎಪಿಎಂಸಿ ಇಲಾಖೆಯು ಇಲ್ಲಿನ ಉಪ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದೆ.
ಉಪ ಮಾರುಕಟ್ಟೆಯ ಬಯಲು ಜಾಗವು ಕಳೆದ ಹಲವು ತಿಂಗಳುಗಳಿಂದ ಕಸ, ಕಡ್ಡಿ ಮತ್ತು ಮುಳ್ಳಿನ ಗಿಡಗಳಿಂದ ಆವರಿಸಿಕೊಂಡಿತ್ತು. ರೈತರಿಗೆ ಸರಿಯಾದ ಸೌಕರ್ಯ ಇಲ್ಲದಿರುವುದು. ಸ್ಥಳಾವಕಾಶ ವಿಲ್ಲದ ಕಾರಣ ರೈತರು ಬೆಳೆದ ಬೆಳೆಗಳನ್ನು ಒಣಗಿಸಲು ಎಪಿಎಂಸಿ ಕಟ್ಟೆ ಬಳಸುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳ ಮೇಲೆ ಪ್ರಜಾವಾಣಿ ಬೆಳಕು ಚಲ್ಲಿತ್ತು.
ಸಧ್ಯ ಎಪಿಎಂಸಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಜೆಸಿಬಿ ಯಂತ್ರ ಮೂಲಕ ಮುಳ್ಳು ಕಂಟಿ ಬೆಳೆದ ಪ್ರದೇಶವನ್ನು ಸ್ವಚ್ಛಗೊಳಿಸಿದ್ದಾರೆ.
ಎಪಿಎಂಸಿ ಕಾರ್ಯದರ್ಶಿ ಸುರೇಶ್ ತಂಗನೂರ ಪ್ರತಿಕ್ರಿಯಿಸಿ, ‘ಉಪ ಮಾರುಕಟ್ಟೆ ಜಾಗವನ್ನು ಹಂತ ಹಂತವಾಗಿ ಸ್ವಚ್ಛಗೊಳಿಸುತ್ತಿದ್ದೇವೆ. ಇದರಿಂದ ರೈತರಿಗೆ ಬಯಲು ಜಾಗವು ಸುಗಮವಾಗಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಎಪಿಎಂಸಿ ಆವರಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.