
ರಾಜಶೇಖರ ಹಿಟ್ನಾಳ
ಕೊಪ್ಪಳ: ಹನುಮಮಲಾ ವಿಸರ್ಜನೆಗೆ ಅಂಜನಾದ್ರಿಗೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ತೆರಳುವ ಮಾಲಾಧಾರಿಗಳಿಗೆ ಇಲ್ಲಿನ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ, ಕೈಗಾರಿಕೆಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮಾರ್ಗದುದ್ದಕ್ಕೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷರೂ ಆದ ಸಂಸದ ರಾಜಶೇಖರ ಹಿಟ್ನಾಳ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಹನುಮ ಮಾಲಾಧಾರಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ವ್ಯವಸ್ಥೆಗಳನ್ನು ಮಾಡಿದೆ. ಜೊತೆಗೆ ಅಂಜನಾದ್ರಿಗೆ ತೆರಳುವ ಮಾರ್ಗದ ಅಲ್ಲಲ್ಲಿ ಹನುಮನ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 30 ಸಾವಿರ ಜನರಿಗೆ ಊಟ, ಉಪಹಾರ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
‘ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನಡೆಯವ ವಿಶೇಷ ಪೂಜಾ ಕಾರ್ಯಕ್ರಮದ ನೇರಪ್ರಸಾರವನ್ನು ಎಲ್.ಇ.ಡಿ ಪರದೆ ಮೂಲಕ ಬೆಟ್ಟದ ಕೆಳಗಿರುವ ಭಕ್ತರಿಗೂ ತೋರಿಸಲು ವ್ಯವಸ್ಥೆ ಮಾಡಲಾಗಿದೆ. ಸಂಗಾಪುರದ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನ, ಆನೆಗೊಂದಿಯ ದುರ್ಗಾದೇವಿ ಬೆಟ್ಟ, ತಿರುಮಲಾಪುರದ ಆಂಜನೇಯಸ್ವಾಮಿ ದೇವಸ್ಥಾನ, ಅಂಜನಾದ್ರಿ ಮುಖ್ಯರಸ್ತೆಯ ಅಗಳಕೇರಾದ ಅಂದಿಗಾಲೇಶ್ವರ ದೇವಸ್ಥಾನ, ಹಿಟ್ನಾಳ ಕ್ರಾಸ್, ಆನೆಗೊಂದಿಯ ಕೃಷ್ಣದೇವರಾಯ ವಿಶ್ರಾಂತಿ ತಾಣ, ಸಾಣಾಪುರ ಐಬಿ, ಕಮಲಾಪುರದ ಕಡ್ಡಿರಾಂಪುರ ಕ್ರಾಸ್ ಬಳಿ ಮಾಲಾಧಾರಿಗಳು ವಿಶ್ರಾಂತಿ ಪಡೆಯಬಹುದು, ಭಜನೆ ಮಾಡಬಹುದು. ಅವರಿಗೆ ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಮಧ್ಯಾಹ್ನದ ತನಕ ಊಟದ ಹಾಗೂ ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿದೆ‘ ಎಂದು ತಿಳಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.
ದೇವಸ್ಥಾನಕ್ಕೆ ಬರುವ ಮಾಲಾಧಾರಿಗಳು ಶಾಂಪೊ ಸೋಪು ಬಳಸಿ ಮಾಲಿನ್ಯ ಮಾಡಬಾರದು. ಅವರಿಗೆ ಕೇಂದ್ರಗಳಲ್ಲಿ ಕಡಲೆಹಿಟ್ಟಿನ ವ್ಯವಸ್ಥೆ ಮಾಡಲಾಗಿದೆ.
-ರಾಜಶೇಖರ ಹಿಟ್ನಾಳ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.