ಕನಕಗಿರಿ: ಮುಟ್ಟಿನ ಸಮಯದಲ್ಲಿ ಕಿಶೋರಿಯರು ಪ್ರತಿ ಎಂಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಹದಿಹರೆಯದವರ ಆಪ್ತ ಸಮಾಲೋಚಕ ಅಮೀನಸಾಬ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊಪ್ಪಳ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಮೀಪದ ಸುಳೇಕಲ್ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಋತುಚಕ್ರ ಸಮಯದಲ್ಲಿ ಬಟ್ಟೆಗಳನ್ನು ಉಪಯೋಗಿಸುವವರು ಶುಭ್ರವಾದ ನೀರಿನಲ್ಲಿ ತೊಳೆದು ಬಿಸಿಲಲ್ಲಿ ಒಣಗಿಸಿದ ನಂತರ ಬಳಕೆ ಮಾಡಬೇಕು. ಪ್ರತಿನಿತ್ಯವೂ ಸ್ನಾನ ಮಾಡಬೇಕು. ಸಮತೋಲನ ಪೌಷ್ಟಿಕ ಆಹಾರ ಸೇವನೆ ಮಾಡಿವುದರ ಜತೆಗೆ ಮುಟ್ಟಿನ ಸಂದರ್ಭದಲ್ಲಿ ಶುಚಿತ್ವವನ್ನು ಕಾಪಾಡಿಕೊಂಡರೆ ಮುಂಬರುವ ದಿನಗಳಲ್ಲಿ ಎದುರಾಗುವ ಆರ್ಟಿಐ ಮತ್ತು ಎಸ್ಟಿಐ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿದೆ’ ಎಂದು ಹೇಳಿದರು.
ಹದಿಹರೆಯದ ಮಕ್ಕಳಿಗೆ ಶೌಚಾಲಯ ಬಳಕೆ, ವೈಯಕ್ತಿಕ ಸ್ವಚ್ಛತೆ, ರಕ್ತ ಹೀನತೆ,ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶ, ಯೋಗ, ಧ್ಯಾನ ವ್ಯಾಯಾಮ ಹಾಗೂ ಬಾಲ್ಯ ವಿವಾಹಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಇದೇ ಸಮಯದಲ್ಲಿ ಅವರು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಗೌರಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ , ಆಶಾ ಕಾರ್ಯಕರ್ತೆಯರಾದ ಹಂಪಮ್ಮ , ಯಶೋದಾಬಾಯಿ, ನೇತ್ರಾವತಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.