ಜನಾರ್ದನ ರೆಡ್ಡಿ, ಶ್ರೀರಾಮುಲು
ಕೊಪ್ಪಳ: ’ಸಮುದಾಯ ಹಾಗೂ ಅಂತಸ್ತು ಆಚೆಗೂ ಉತ್ತಮ ಸ್ನೇಹ ಹೊಂದಿರುವ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರ ನಡುವಿನ ಬಾಂಧವ್ಯಕ್ಕೆ ಅಡ್ಡಗಾಲು ಹಾಕಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಪ್ರಯತ್ನಿಸುತ್ತಿದ್ದಾರೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಯಮನೂರಪ್ಪ ಚೌಡ್ಕಿ, ಜೋಗದ ದುರ್ಗಪ್ಪ ನಾಯಕ, ವಿರೂಪಾಕ್ಷ ನಾಯಕ, ಶಿವಾನಂದ ಗೌಡ ಹಾಗೂ ಪಂಪಣ್ಣ ನಾಯಕ ‘ರೆಡ್ಡಿ ಮತ್ತು ರಾಮುಲು ಅವರು ಮೊದಲಿನಿಂದಲೂ ಉತ್ತಮ ಸ್ನೇಹಿತರು. ಅವರ ನಡುವೆ ವ್ಯವಹಾರಿಕವಾಗಲಿ ಅಥವಾ ಬೇರೆ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ. ಅವರ ಜಗಳಕ್ಕೆ ಜಾತಿಯ ಲೇಪನ ಬೇಡ’ ಎಂದರು.
‘ರಾಮುಲು ಅವರು ಮೂರನೇ ವ್ಯಕ್ತಿಯ ಮಾತಿಗೆ ಕಿವಿಗೊಡಬಾರದು. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಇವರ ಸ್ನೇಹವೇ ಕಾರಣ. ರಾಮುಲು ಕೂಡ ನಮ್ಮ ನಾಯಕರೇ ಆಗಿದ್ದು ವ್ಯವಹಾರಕ್ಕೆ ಸಮಸ್ಯೆ ಇದ್ದರೆ ಮಾತನಾಡಿ ಪರಿಹರಿಸಿಕೊಳ್ಳಬೇಕು. ರಾಜಕೀಯವಾಗಿ ವಾಲ್ಮೀಕಿ ಸಮುದಾಯದ ನಾಯಕರ ಬೆಳವಣಿಗೆ ಸಹಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ರೆಡ್ಡಿ ಹಾಗೂ ರಾಮುಲು ನಡುವೆ ಕಂದಕ ಉಂಟು ಮಾಡುವ ಕಾಂಗ್ರೆಸ್ ತಂತ್ರ ಇದಾಗಿದ್ದು, ಇದಕ್ಕೆ ಇಬ್ಬರೂ ನಾಯಕರು ಬಲಿಯಾಗಬಾರದು’ ಎಂದು ಮನವಿ ಮಾಡಿದರು.
‘ವಾಲ್ಮೀಕಿ ಮಹಾಸಭಾದವರು ರಾಮುಲು ಅವರನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ. ಇದೇ ಸಮಾಜದ ನಾಗೇಂದ್ರ ಸಚಿವರಾಗಿ ಭ್ರಷ್ಟಾಚಾರ ಮಾಡಿದಾಗ ಯಾಕೆ ಧ್ವನಿ ಎತ್ತಲಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.