
ಗಂಗಾವತಿ: ತಾಲ್ಲೂಕಿನ ಗುಂಡಮ್ಮ ಕ್ಯಾಂಪ್ ನಿವಾಸಿ ರಾಜೇಶಕುಮಾರ ಸುರಾಣ ಎಂಬ ಗ್ರಾಹಕರಿಗೆ ಆರೋಗ್ಯ ವಿಮೆ ಪರಿಹಾರ ಮೊತ್ತ ಪಾವತಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿದ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಶಾಖಾ ಕಚೇರಿ ಬಳ್ಳಾರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರಿಗೆ ದಂಡ ಸಹಿತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರ ರಾಜೇಶಕುಮಾರ ಅವರು 2022ರ ಏಪ್ರಿಲ್ 10ರಿಂದ 2023ರ ಏಪ್ರಿಲ್ 9ರ ತನಕದ ಅವಧಿಗೆ ವಿಮಾ ಮೊತ್ತ ₹5 ಲಕ್ಷಕ್ಕೆ ವಿಮಾ ಕಂತು ₹24,149 ಪಾವತಿಸಿದ್ದರು. 2ನೇ ದೂರುದಾರೆ ಶೋಭಾದೇವಿ ರಾಜೇಶಕುಮಾರ ಅವರಿಗೆ ಅನಾರೋಗ್ಯವಾಗಿ 2023ರ ಮಾರ್ಚ್ 4ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳ ಬಳಿಕ ಬಿಡುಗಡೆ ಆಗಿದ್ದು, ಈ ಅವಧಿಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಪೂರ್ವ ಅನುಮೋದನೆ ಪಡೆದುಕೊಂಡಿದ್ದರು.
ಪೂರ್ವ ಅನುಮೋದನೆ ಆಧಾರದ ಮೇಲೆ 2ನೇ ದೂರುದಾರರು ಚಿಕಿತ್ಸೆ ಪಡೆದ ಆಸ್ಪತ್ರೆಗೆ ನೆಫ್ಟ್ ಮೂಲಕ ₹2.49 ಲಕ್ಷ ಪಾವತಿಸಿದ್ದರು. ಪುನಃ ದೂರುದಾರರು ಎದುರುದಾರರಿಗೆ ಆಸ್ಪತ್ರೆಯ ಪೂರ್ವ ವೆಚ್ಚಗಳಿಗಾಗಿ ಗಂಗಾವತಿಯ ಸಿದ್ದೇಶ್ವರ ನರ್ಸಿಂಗ್ ಹೋಮ್ ಮತ್ತು ಎಕ್ಸರೇ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದುಕೊಂಡು ಇದಕ್ಕಾಗಿ ₹49,852 ಪಾವತಿಸಿ ದಾಖಲೆ ಹಾಜರುಪಡಿಸಿದ್ದರು.
ಆ ಮೊತ್ತವನ್ನು ಪರಿಗಣಿಸುವಂತೆ ಎದುರುದಾರರಿಗೆ ವಿನಂತಿಸಿದ್ದರೂ ವಿಮೆ ನಿಯಮ ಮತ್ತು ಷರತ್ತುಗಳ ಪ್ರಕಾರ ದೂರುದಾರರಿಗೆ ನೆಫ್ಟ್ ಮೂಲಕ ಪುನಃ ₹25,669 ಮೊತ್ತ ಪಾವತಿಸಿದ್ದರು. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ₹49,852 ಇದ್ದರೂ ಕಡಿಮೆ ಮೊತ್ತ ಪಾವತಿಸಿದ್ದರಿಂದ ಗ್ರಾಹಕರು ಅಸಮಾಧಾನಗೊಂಡು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದರು.
ಜಿಲ್ಲಾ ಆಯೋಗದ ಅಧ್ಯಕ್ಷೆ ಜಿ.ಇ. ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯ ರಾಜು ಎನ್. ಮೇತ್ರಿ ರವರು ವಾದ ಪ್ರತಿವಾದ ಆಲಿಸಿ, ಎದುರುದಾರರು ದೂರುದಾರರಿಗೆ ಚಿಕಿತ್ಸೆಯ ಉಳಿದ ವೆಚ್ಚ ₹21,733, ದೂರಿನ ಖರ್ಚು ₹5000 ಗ್ರಾಹಕರಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.