
ಕೊಪ್ಪಳ: ರಾಜ್ಯದಲ್ಲಿನ ಗುತ್ತಿಗೆದಾರರ ಬಿಲ್ ಪಾವತಿಗೆ ಸರ್ಕಾರ ಸತಾಯಿಸುತ್ತಿದ್ದು ಸಮಸ್ಯೆ ತಾರಕಕ್ಕೆ ಏರಿದೆ. ಎಪ್ರೀಲ್ ತಿಂಗಳ ಒಳಗೆ ಬಾಕಿ ಮೊತ್ತ ಪಾವತಿಸದಿದ್ದರೆ ಕುಟುಂಬದ ಸದಸ್ಯರೊಂದಿಗೆ ಅನಿರ್ದಿಷ್ಟ ಅವಧಿಯವರೆಗೂ ಧರಣಿ ನಡೆಸತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ ಹೇಳಿದರು.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾ.6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಕುಟುಂಬವರೆಲ್ಲೂ ನಿರಂತರ ಧರಣಿ ನಡೆಸಲು ನಿರ್ಧರಿದ್ದೇವೆ’ ಎಂದರು.
‘ರಾಜ್ಯದಲ್ಲಿರುವ ಸುಮಾರು ಒಂದೂವರೆ ಲಕ್ಷದಷ್ಟು ಗುತ್ತಿಗೆದಾರರಿಗೆ ರಾಜ್ಯ ಸರ್ಕಾರದಿಂದ ₹37 ಸಾವಿರ ಕೋಟಿ ಬಿಲ್ ಬಾಕಿ ಬರಬೇಕಿದ್ದರೂ ಸರ್ಕಾರದಿಂದ ಬಾಕಿ ಉಳಿಸಿಕೊಳ್ಳುವ ಪ್ರವೃತ್ತಿ ಮುಂದುವರೆದಿದೆ. ಹಾಗಾಗಿ ಗುತ್ತಿಗೆದಾರರು ದೀವಾಳಿ ಅಂಚಿಗೆ ತಲುಪಿದ್ದರೂ ಸರ್ಕಾರಕ್ಕೆ ಕರುಣೆ ಎಂಬುದೇ ಇಲ್ಲ’ ಎಂದು ಅಸಮಾಧಾನ ಹೊರಹಾಕಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ಪ್ಯಾಕೇಜ್ ಟೆಂಡರ್ ವ್ಯವಸ್ಥೆ ಇಲ್ಲ. ಬಿಲ್ ಬಾಕಿ ಪಾವತಿ ವಿಷಯದಲ್ಲಿ ಮಾತೆತ್ತಿದರೆ ಸಾಕು ಮುಖ್ಯಮಂತ್ರಿ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಿಂದೆ ವಿರೋಧಪಕ್ಷದ ನಾಯಕ ಇದ್ದಾಗ ಪ್ಯಾಕೇಜ್ ವ್ಯವಸ್ಥೆ ವಿರೋಧಿಸುತ್ತಿದ್ದ ಸಿದ್ದರಾಮಯ್ಯ ಈಗ ಹಿಂದಿದ್ದ ಬದ್ಧತೆ ಮರೆದಿದ್ದಾರೆ ಎಂದರು.
ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ವಹಿಸುತ್ತಿರುವುದು ಮತ್ತು ₹1 ಕೋಟಿಗಿಂತ ಹೆಚ್ಚಿನ ಮೊತ್ತದಲ್ಲಿ ಪ್ಯಾಕೇಜ್ ಟೆಂಡರ್ಗೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಮುಖ್ಯಮಂತ್ರಿ ಅದಕ್ಕೆ ಅನುಮೋದನೆ ನೀಡುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾದವರು ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಭೆ ನಡೆಸುತ್ತಿದ್ದರೆ ಅಸಹಾಯಕ ಸ್ಥಿತಿ ತಲುಪಿರುವ ಸಿದ್ದರಾಮಯ್ಯ ಮಾತ್ರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಜಾರಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅಥವಾ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿಯಬೇಕೆಂಬ ಉದ್ದೇಶ ನಮ್ಮದಲ್ಲ. ಪ್ರತಿಭಟನೆ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ ಎಂದರು.
ಸುರೇಶ ಭೂಮರಡ್ಡಿ, ದೇವಪ್ಪ ಅರಕೇರಿ, ಜಗದೀಶ, ಮಧುಸೂದನ್, ಯಮನೂರಪ್ಪ ನಡುವಿನಮನಿ, ಕೃಷ್ಣಾ ಇಟ್ಟಂಗಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.