ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಂದೂಡಿಕೆ; ಕೋವಿಡ್ ಕಾರಣಕ್ಕೆ ಅನುಮತಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:09 IST
Last Updated 29 ಮಾರ್ಚ್ 2021, 2:09 IST

ಕುಷ್ಟಗಿ: ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಏ.1-2 ರಂದು ನಡೆಯಬೇಕಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀಡಿದ್ದ ಅನುಮತಿಯನ್ನು ತಾಲ್ಲೂಕು ಆಡಳಿತ ಹಿಂಪಡೆದಿದೆ. ಆದ್ದರಿಂದ ಸಮ್ಮೇಳನ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್ ಎಂ.ಸಿದ್ದೇಶ್,‘ಈ ಹಿಂದೆ ಐದು ನೂರು ಜನ ಸಂಖ್ಯೆ ಮಿತಿಯಲ್ಲಿ ಮತ್ತು ಕೋವಿಡ್‌ ನಿಯಮಗಳ ಅನುಸಾರ ಸಮ್ಮೇಳನ ನಡೆಸುವ ಷರತ್ತಿಗೆ ಒಳಪಟ್ಟು ಪರವಾನಗಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣಕ್ಕೆ ಪರಿಸ್ಥಿತಿಯ ಬಗ್ಗೆ ಪುನರಾವಲೋಕನ ನಡೆಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಅನ್ವಯ ಸಮ್ಮೇಳನದ ಪರವಾನಗೆಯನ್ನು ಹಿಂಪಡೆಯಲಾಗಿದೆ’ ಎಂದರು.ಸಿದ್ಧತೆ: ಈ ಮಧ್ಯೆ ಹನುಮಸಾಗರದಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊನೆಗಳಿಗೆಯಲ್ಲಿ ಸಮ್ಮೇಳನ ರದ್ದಾಗಿರುವುದು ಸಾಹಿತ್ಯ ಅಭಿಮಾನಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳಲ್ಲಿ ನಿರಾಸೆ ಉಂಟು ಮಾಡಿದೆ.

ಸಮ್ಮೇಳನಕ್ಕೆ ನೀಡಿದ್ದ ಪರವಾನಗಿಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ದಿಢೀರ್‌ ಹಿಂಪಡೆದಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಅಂಗಡಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಭಾನುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ಸಮ್ಮೇಳನ ಮುಂದೂಡಲಾಗಿದೆ ಹೊರತು ರದ್ದಾಗಿಲ್ಲ. ಸಮ್ಮೇಳನದ ಸರ್ವಾಧ್ಯಕ್ಷರೂ ಬದಲಾಗಿಲ್ಲ. ಆದರೆ ಸರ್ಕಾರದ ಸೂಚನೆಯಂತೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದೆವು, ಐದು ನೂರು ಜನರಿಗಿಂತ ಹೆಚ್ಚಿನವರನ್ನು ಸೇರಿಸುತ್ತಿರಲಿಲ್ಲ. ಕೋವಿಡ್‌ ನಿಯಮಗಳ ಪ್ರಕಾರವೇ ಸಮ್ಮೇಳನ ನಡೆಸಲು, ಎಲ್ಲ ರೀತಿಯ ಸುರಕ್ಷಾ ನಿಯಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ಹೀಗಿದ್ದೂ ಪರವಾನಗಿಯನ್ನು ಹಿಂಪಡೆದಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.