ADVERTISEMENT

ಡಿಕೆಶಿ- ಆನಂದ್ ಸಿಂಗ್ ಭೇಟಿ ಅಪಪ್ರಚಾರ ಸಲ್ಲದು: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 9:43 IST
Last Updated 2 ಫೆಬ್ರುವರಿ 2022, 9:43 IST
   

ಕೊಪ್ಪಳ: ಹುಲಿಗಿ ಹುಲಿಗೆಮ್ಮದೇವಿ ಮತ್ತು ಅಂಜನಾದ್ರಿ ಆಂಜನೇಯ ದೇವಸ್ಥಾನದ ಅಭಿವೃದ್ಧಿ ಸಿಎಂ ಬಯಕೆಯಾಗಿದೆ. ಇಷ್ಟರಲ್ಲಿಯೇ ಸಭೆ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ದೇವಿಯ ಆಶೀರ್ವಾದಕ್ಕೆ ಹುಲಿಗೆಗೆ ಬಂದಿದ್ದು, ಸಾರ್ಥಕತೆ ಮೂಡಿಸಿದೆ. ಇದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದರು.

ಸಚಿವ ಆನಂದ ಸಿಂಗ್ ಅಣ್ಣನವರ ಸಹಕಾರದೊಂದಿಗೆ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದರು.

ADVERTISEMENT

ಡಿಕೆಶಿ- ಆನಂದ್ ಸಿಂಗ್ ಭೇಟಿ ಅಪಪ್ರಚಾರ ಸಲ್ಲದು: ಗಂಗಾರತಿ ಮಾದರಿಯಲ್ಲಿ ನಡೆಯುವ ತುಂಗಾರತಿ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಅವರು ಹೋಗಿದ್ದಾರೆ. ಇದಕ್ಕೆ ಅಪಪ್ರಚಾರ ಸಲ್ಲದು ಎಂದರು.

ಸಿದ್ದು ಹೇಳಿಕೆಗೆ ವಿರೋಧ: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮಾರುತ್ತಿದ್ದಾರೆ ಎಂಬ ಹೇಳಿಕೆ ಅತ್ಯಂತ ಬಾಲಿಶತನದಿಂದ ಕೂಡಿದೆ. ಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯನವರು ವಿರೋಧಕ್ಕಾಗಿ ವಿರೋಧಾಭಾಸದ ಹೇಳಿಕೆ ನೀಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಆಕಾಶ, ಭೂಮಿಯಲ್ಲಿ ಹಗರಣ ನಡೆಸಿದೆ. ಮೋದಿ ನೇತೃತ್ವದ ಸರ್ಕಾರದ ಬಜೆಟ್ ಅಭಿವೃದ್ಧಿಗೆ ಹೊಸ ಶಕೆ ಮೂಡಿಸಿದೆ. ಅದನ್ಬು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವವರು ಹೆಚ್ಚಾಗಿದ್ದಾರೆ. ಬಿಜೆಪಿಯಿಂದ ಯಾರೂ ಕಾಂಗ್ರೆಸ್ ನತ್ತ ಹೋಗುವುದಿಲ್ಲ. ಯತ್ನಾಳ ಅಣ್ಣನವರು ಯಾವ ಆಧಾರದ ಮೇಲೆ ಹೇಳಿದ್ದಾರೆಂಬುವುದು ಗೊತ್ತಿಲ್ಲ ಎಂದರು.

ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಅವರು ವಹಿಸಿಕೊಟ್ಟ ಕೆಲಸ ಪ್ರಾಮಾಣಿಕವಾಗಿ ನಿಭಾಸುವೆ ಎಂದರು.

ಜಿಲ್ಲೆಗೆ ಮುಜರಾಯಿ ಇಲಾಖೆ ಸಚಿವರಾಗಿ ಮೊದಲಬಾರಿಗೆ ಬಂದ ಜೊಲ್ಲೆಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಅಭಿವೃದ್ಧಿ ಮಂಡಳಿ ಸದಸ್ಯರು ವಿವಿಧ ಕಾಮಗಾರಿಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಆಡಾಳಿತಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.