
ಗಂಗಾವತಿ: ‘ವೈದ್ಯ ವೃತ್ತಿ ಎಂಬುದು ಒಂದು ಸೇವಾ ವೃತ್ತಿ. ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಬಡವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸೌಲಭ್ಯ ದೊರತಂತೆ ಆಗುತ್ತದೆ. ಈ ಬಗ್ಗೆ ಸರ್ಕಾರ ವಿಶೇಷ ಕಾಯ್ದೆ ರೂಪಿಸಿದೆ’ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.
ನಗರದ ರಾಯಚೂರು ರಸ್ತೆಯಲ್ಲಿನ ಅಮರ್ ಗಾರ್ಡನ್ನಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಶುಕ್ರವಾರ ನಡೆದ ಭಾರತೀಯ ವೈದ್ಯಕೀಯ ಸಂಘದ 91ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಇತಿಹಾಸ ಗಮನಿಸಿದಾಗ ಕಾಯಿಲೆಗಳಿಗೆ ಔಷಧ ನೀಡುವ ವೃತ್ತಿಯನ್ನು ಖುಷಿ ಮುನಿಗಳು ಸೇವಾ ಮನೋಭಾವದಿಂದ ಮಾಡಿಕೊಂಡು ಬಂದಿದ್ದು, 21ನೇ ಶತಮಾನದಲ್ಲಿ ವೈದ್ಯಕೀಯ ವೃತ್ತಿಯಾಗಿದೆ. ಔಷಧ ನೀಡುವ ಕೆಲಸ ಮಾಡುತ್ತಿರುವ, ಮುಂದುವರಿಸಿಕೊಂಡು ಹೋಗುತ್ತಿರುವ ವೈದ್ಯರು ಸೇವಾ ಮನೋಭಾವ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಾಗಿದೆ. ಗ್ರಾಮೀಣ ಭಾಗಗಳಲ್ಲಿ ಎಷ್ಟೋ ಜನರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ವೈದ್ಯರು ಗ್ರಾಮೀಣ ಭಾಗದ ಸೇವೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಇನ್ನು ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ವೈದ್ಯರ ಪಾತ್ರ ಬಹಳ ಮುಖ್ಯವಾಗಿದೆ. ಕೋವಿಡ್ನಂತಹ ಸಮಯದಲ್ಲಿ ಎಷ್ಟೋ ವೈದ್ಯರು ತಮ್ಮ ಪ್ರಾಣ ಲೆಕ್ಕಿಸದೆ ಸೇವೆ ಸಲ್ಲಿಸಿ, ಸಾಕಷ್ಟು ಜನರ ಪ್ರಾಣ ಕಾಪಾಡಿದ್ದಾರೆ’ ಎಂದರು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ವಿ.ವಿ.ಚಿನಿವಾಲರ್ ಮಾತನಾಡಿ, ‘ಭಾರತೀಯ ವೈದ್ಯಕೀಯ ಸಂಘ ಪ್ರತಿವರ್ಷವೂ ರಾಜ್ಯಮಟ್ಟದ ಸಮ್ಮೇಳನ ನಡೆಸುವ ಮೂಲಕ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾರಕ ಕಾಯಿಲೆಗಳಿಗೆ ಔಷಧಗಳು ದೊರೆಯುತ್ತಿವೆ. ಆ ಕಾಯಿಲೆಗಳನ್ನು ಮೊದಲ ಹಂತದಲ್ಲಿ ಗುರುತಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿಯೇ ಸಮ್ಮೇಳನದಲ್ಲಿ ವೈದ್ಯಕೀಯ ಚರ್ಚಾಗೋಷ್ಠಿಗಳ ಮೂಲಕ ವೈದ್ಯರಿಗೆ ತಿಳಿಸುವ ಕೆಲಸ ಸಂಘದಿಂದ ಮಾಡಲಾಗುತ್ತಿದೆ’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ಧಿ, ಕಿಮ್ಸ್ ನಿರ್ದೇಶಕ ವೈಜನಾಥ ಇಟಗಿ, ವೈದ್ಯ ಡಾ.ಹರೀಶ್, ಡಾ.ಶಂಕರ ನಾರಾಯಣ, ಡಾ.ಬಸವರಾಜ ಸಿಂಗನಾಳ, ಡಾ.ಅಮರೇಶ ಪಾಟೀಲ್, ಡಾ.ಮಲ್ಲನಗೌಡ, ಡಾ.ಎಸ್.ವಿ.ಮಟ್ಟಿ, ಡಾ.ಬಸವರಾಜ, ಡಾ.ಅರುಣಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.