ಮೈಲಾಪುರ (ಕಾರಟಗಿ): ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ತುರ್ತು ಕ್ರಮ ಕೈಗೊಳ್ಳಬೇಕು. ನಾಶಗೊಂಡಿರುವ ನಳಗಳ ಸ್ಥಳದಲ್ಲಿ ಹೊಸ ನಳಗಳನ್ನು ಹಾಕಬೇಕು ಸೇರಿದಂತೆ ವಿವಿಧ ಅಗತ್ಯ ಸೌಲಭ್ಯಗಳನ್ನು ಶೀಘ್ರವೇ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ ಡಾ. ಎನ್. ಮೂರ್ತಿ ಬಣ) ಮೈಲಾಪುರ ಗ್ರಾಮ ಘಟಕ ಆಗ್ರಹಿಸಿ ಶುಕ್ರವಾರ ಮನವಿ ಸಲ್ಲಿಸಿತು.
ತಾಲ್ಲೂಕಿನ ಮೈಲಾಪುರ ಗ್ರಾಮದ 2ನೇ ವಾರ್ಡ್ನಲ್ಲಿ ಬಹುತೇಕರು ಪರಿಶಿಷ್ಟ ಜಾತಿ, ಜನಾಂಗದವರು ವಾಸಿಸುತ್ತಿದ್ದಾರೆ. ಹಿಂದೆ ಕುಡಿಯುವ ನೀರು ಸರಬರಾಜಿಗೆ ಹಾಕಿದ್ದ ನಳಗಳಲ್ಲಿ ನೀರು ಬರುತ್ತಿಲ್ಲ. ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಕೆಲವೆಡೆ ಹಾಕಿದ್ದ ನಳಗಳು ನಾಶಗೊಂಡಿದ್ದು, ಹೊಸ ನಳಗಳನ್ನು ಉಚಿತವಾಗಿ ಅಳವಡಿಸಬೇಕು. ಸದಾ ನೀರು ಸರಬರಾಜು ಆಗಲು ಕ್ರಮ ಕೈಗೊಳ್ಳಬೇಕು. ವಾರ್ಡ್ನಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು. ತಗ್ಗು, ದಿನ್ನೆಗಳಿಂದ ರಸ್ತೆಗಳಿದ್ದು ಸಿಸಿ ರಸ್ತೆ ನಿರ್ಮಿಸಬೇಕು. ಜಾನುವಾರುಗಳ ನೀರಿನ ಅನುಕೂಲಕ್ಕೆ ನೀರಿನ ದೋಣಿ ನಿರ್ಮಿಸಬೇಕು. ವಿದ್ಯಾರ್ಥಿಗಳ ಪಠ್ಯಪುಸ್ತಕದ ಅನುದಾನವನ್ನು ಹೆಚ್ಚಿಸಬೇಕು. ನಾಗರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ಹಾಗೂ ಅಭಿವೃದ್ದಿ ಅಧಿಕಾರಿ ಆದ್ಯತೆ ಮೇರೆಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಸಮಿತಿಯ ಅಧ್ಯಕ್ಷ ಹುಲಗಪ್ಪ ರಾಂಪುರ, ಉಪಾಧ್ಯಕ್ಷ ಹನುಮರಡ್ಡಿ, ಪ್ರಧಾನ ಕಾರ್ಯದರ್ಶಿ ಈರೇಶ ರಾಂಪುರ ಪ್ರಮುಖರಾದ ಗಂಗಪ್ಪ, ಭೀಮಪ್ಪ ಕಾಟಾಪುರ, ಯಮನೂರ ಪುಜಾರಿ, ಹನುಮಂತ, ಯಲ್ಲಪ್ಪ, ಶಿವಪ್ಪ, ಮಂಜುನಾಥ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.