ಗಂಗಾವತಿ: ನಗರದಲ್ಲಿ ಮುಸ್ಲಿಂ ಸಮುದಾಯದವರು ಮಂಗಳವಾರ ಶ್ರದ್ಧಾ, ಭಕ್ತಿಯಿಂದಈದ್ ಮಿಲಾದ್ ಆಚರಿಸಿದರು.
ಬೆಳಿಗ್ಗೆ ಮನೆಗಳಲ್ಲಿ ಮಹಿಳೆಯರು ಮತ್ತು ಪುರುಷರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪುರುಷರು ಮಸೀದಿಗೆ ಬಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ನಗರದ ಎಲ್ಲ ಮಸೀದಿಗಳ ಮುಸ್ಲಿಮರು ಆಟೊ, ಟಾಟಾ ಏಸ್ ವಾಹನ, ತಳ್ಳುಗಾಡಿ ಮೇಲೆ ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್ ಮಿನಾರ್ ಪ್ರತಿಕೃತಿ ಇರಿಸಿ ಮೆರವಣಿಗೆ ಮಾಡಲಾಯಿತು.
ಈ ಮೆರವಣಿಗೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಚಿಣ್ಣರರಿಂದ ವಯಸ್ಕರ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಗೀತಕ್ಕೆ ಭಕ್ತಿಯಿಂದ ಭಾವದಿಂದ ಹೆಜ್ಜೆಗಳು ಹಾಕಿದರು.
ಮೆರವಣಿಗೆಯಲ್ಲಿ ಅರ್ಧ ಚಂದ್ರದ ಧ್ವಜ ಹಾಗೂ ಹಸಿರು ವರ್ಣದ ಧ್ವಜಗಳು ರಾರಾಜಿಸಿದವು. ಹಾಗೇಯೆ ದೇವರ ಹೆಸರಲ್ಲಿ ಆರಾಧನೆ ಮಾಡುತ್ತಾ, ಮಹ್ಮದ್ ಪೈಗಂಬರ್ ಸಂದೇಶಗಳ ಕುರಿತು ಘೋಷಣೆಕೂಗಿದರು.
ನಗರದ ಬೆರೋನಿ ಮಸೀದಿ ಕಡೆಯಿಂದ ಆರಂಭಗೊಂಡ ಮೆರವಣಿಗೆ ಪೀರ್ ಜಾಧವ ಓಣಿ, ಬಸವಣ್ಣ ಸರ್ಕಲ್ ಮೂಲಕ ಜಾಮೀಯಾ ಮಸೀದಿಗೆ ತೆರಳಿ ಸಮಾರೋಪ ಆಯಿತು.
ನೂರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮೆರಗು ತಂದರು. ನಗರದಲ್ಲಿ ಶಾಂತಿ ಕಾಪಾಡಲು ನಗರ ಪೋಲಿಸ್ ಠಾಣೆ ಸಿಬ್ಬಂದಿ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ, ಮುಖಂಡರಾದ ಖಾಜಿಸಾಬ್, ಮೀರ್ ಅಹ್ಮದ್ ಅಲಿ ಹಾಜಿ, ಬಿಚ್ಚಿಗತ್ತಿ ಮಹ್ಮದ್ ಉಸ್ಮಾನ್, ಅಯೂಬ್ ಖಾನ್, ಮಹ್ಮದ್ ಅಲ್ತಾಫ್, ಸೈಯದ್ ನಾಜೀಂ, ಸಂತೋಷ್ ರಾಯ್ಕರ್, ಶಬ್ಬೀರ್ ಭರಣಿ, ಡಿಶ್ ಜಿಲಾನಿ, ಸಾಧಿಕ್, ಜಿನ್ನಾ ಮನಿಯಾರ್, ಅನ್ವರ್, ಹನುಮಂತಪ್ಪ ನಾಯಕ್, ಬಸಪ್ಪ ನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.