ಕಾರಟಗಿ: ಶಾಸಕ ಬಸವರಾಜ ದಢೇಸುಗೂರು ಕೊಪ್ಪಳ ಗ್ರೀನ್ ಪವರ್ ಮಾರ್ಗವಾಗಿ ರೇಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಸೋಮವಾರ ಚಾಲನೆ ನೀಡಿದ ಬೆನ್ನಲ್ಲೇ, ಆಕ್ರೋಶಗೊಂಡ ಕಾರಟಗಿ- ಚನ್ನಳ್ಳಿ ಹಳೆಯ ರಸ್ತೆ ಅಕ್ಕ, ಪಕ್ಕದ ರೈತರು ಮೂಲ ಯೋಜನೆಯಲ್ಲಿರುವಂತೆಯೇ ರಸ್ತೆ ನಿರ್ಮಿಸಬೇಕು. ಅದಕ್ಕೆ ಬೇಕಾದ ಭೂಮಿಯನ್ನು ನೀಡಲು ಸಿದ್ದ ಎಂದು ಸ್ಟ್ಯಾಂಪ್ನಲ್ಲಿ ಒಪ್ಪಿಗೆಯ ಪತ್ರವನ್ನು ಸೋಮವಾರ ಗ್ರೇಡ್-2 ತಹಶೀಲ್ದಾರ ವಿಶ್ವನಾಥ ಮುರಡಿಗೆ ಸಲ್ಲಿಸಿದರು.
ರೈಲ್ವೆ ನಿಲ್ದಾಣಕ್ಕೆ ಪಟ್ಟಣದಿಂದ ಎಪಿಎಂಸಿ ಮಾರ್ಗವಾಗಿ ಕಾರಟಗಿ- ಚನ್ನಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ಅಧಿಕೃತ ರಸ್ತೆ ಎಂದು ಘೋಷಿಸಿ, ಸರ್ವೆ ನಡೆಸಲಾಗಿತ್ತು. ಈಗಾಗಲೇ ಅರ್ಧ ಪ್ರದೇಶದಲ್ಲಿ ರಸ್ತೆ ನಿರ್ಮಿಸಲಾಗಿದೆ. ಹಿಂದಿನ ರಸ್ತೆಯನ್ನೇ ಅಭಿವೃದ್ದಿ ಮಾಡಬೇಕು. ಬೇಕಾದ ಜಮೀನನ್ನು ರಸ್ತೆಯ ಎಡ, ಬಲ ಭಾಗದ ರೈತರು ನೀಡಲು ಸಿದ್ದರಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ರೈತರು ಇದೇ ಬೇಡಿಕೆಗೆ ಆಗ್ರಹಿಸಿ ಸಂಸದ, ಶಾಸಕ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸಕಾರಾತ್ಮಕ ಸ್ಪಂದನೆ ದೊರೆತಿತ್ತು. ಇದೀಗ ಯಾವುದೋ ಲಾಬಿಗೆ ಮಣಿದು ನೂತನ ರಸ್ತೆ ನಿರ್ಮಾಣಕ್ಕೆ ಮುಂದಾಗಿ ಚಾಲನೆ ನೀಡಲಾಗಿದೆ. ಜನವಿರೋಧಿ, ಯೋಜನೆಯಲ್ಲಿರುವ ರಸ್ತೆಯನ್ನು ನಿರ್ಲಕ್ಷಿಸಿ ರಸ್ತೆ ಅಭಿವೃದ್ದಿ ಮುಂದಾದರೆ ಅವಕಾಶ ನೀಡುವುದಿಲ್ಲ ಎಂದು ರೈತರು ಎಚ್ಚರಿಸಿದರು.
ಜಮೀನು ಮಾಲಿಕರಾದ ವೀರೇಶಪ್ಪ ಚಿನಿವಾಲರ್, ನಾರಾಯಣಪ್ಪ ಈಡಿಗೇರ, ಚಿದಾನಂದಪ್ಪ ಈಡಿಗೇರ, ಅಯ್ಯಪ್ಪ ಬಂಡಿ, ನಾರಾಯಣ ಈಡಿಗೇರ್, ಅಮರೇಶ ಪೊಲೀಸ ಪಾಟೀಲ, ಉದಯ ಈಡಿಗೇರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.