ADVERTISEMENT

ರಸ್ತೆಗೆ ಭತ್ತ ಸುರಿದು ರೈತರ ಆಕ್ರೋಶ

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಆಗ್ರಹ: ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:56 IST
Last Updated 3 ಮೇ 2022, 4:56 IST
ಕಾರಟಗಿಯಲ್ಲಿ ರೈತರು ರಸ್ತೆಗೆ ಭತ್ತ ಸುರಿದು ಪ್ರತಿಭಟನೆ ನಡೆಸಿದರು
ಕಾರಟಗಿಯಲ್ಲಿ ರೈತರು ರಸ್ತೆಗೆ ಭತ್ತ ಸುರಿದು ಪ್ರತಿಭಟನೆ ನಡೆಸಿದರು   

ಕಾರಟಗಿ: ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಕನಕದಾಸ ವೃತ್ತದಲ್ಲಿ ರಸ್ತೆಗೆ ಭತ್ತ ಸುರಿದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ರೈತರೊಂದಿಗೆ ಪಟ್ಟಣದ ವಿಶೇಷ ಎಪಿಎಂಸಿಯಿಂದ ಕನಕದಾಸ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ರೈತರು ತಹಶೀಲ್ದಾರ್ ರವಿ ಎಸ್.‌ಅಂಗಡಿ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಚ್.ರವಿನಂದ, ಪುರಸಭೆ ಸದಸ್ಯ ಕೆ. ಎಚ್.ಸಂಗನಗೌಡ, ಕಾಂಗ್ರೆಸ್‌ ಪಕ್ಷದ ಪ್ರಮುಖರಾದ ನಾಗರಾಜ ತಂಗಡಗಿ, ಕಾಂಗ್ರೆಸ್‌ ಸಮಿತಿ ಬ್ಲಾಕ್‌ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ, ರೈತ ಸಂಘದ ಅಧ್ಯಕ್ಷರಾದ ಶರಣಪ್ಪ ದೊಡ್ಮನಿ ಯರಡೋಣ ಹಾಗೂ ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ವಿಶೇಷ ಎಪಿಎಂಸಿಯ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಶಶಿಧರಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಭಾವಿ, ಕೆ. ಸಿದ್ದನಗೌಡ, ಶರಣಬಸವರಾಜರೆಡ್ಡಿ, ಶರಣಪ್ಪ ಪರಕಿ, ತಿಪ್ಪೇಶ, ಉಪನಾಳ, ಸಿ. ಎಚ್. ರವಿನಂದ, ಉದಯ ಈಡಿಗೇರ, ಸಿ. ಗದ್ದೆಪ್ಪ ನಾಯಕ ಹಾಗೂ ನಾರಾಯಣಪ್ಪ ಈಡಿಗೇರ, ಪರಶುರಾಮ ಇದ್ದರು.

ಸತ್ಯಾಗ್ರಹ ಅಂತ್ಯ
ಕಾರಟಗಿ:
‘ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ನಡೆಸುತ್ತಿದ್ದ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆಯ ಕಾರಣಕ್ಕೆ ಅಂತ್ಯಗೊಳಿಸಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರಣೇಗೌಡ ದೊಡ್ಮನಿ ಹೇಳಿದರು.

ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಏ.04 ರಿಂದ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುವುದು. ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸರ್ಕಾರದ ಆದೇಶದ ಬಳಿಕ ಖರೀದಿ ಆರಂಭಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಸತ್ಯಾಗ್ರಹ ನಿರತ ರೈತರಿಗೆ ಎಳನೀರು ಕುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.