ಅಡವಿಹಳ್ಳಿ (ಕುಕನೂರು): ‘ರೈತರು ಅಲ್ಪ ಪ್ರಮಾಣದಲ್ಲಿ ಬೆಳೆದು ಅಧಿಕ ಲಾಭ ಪಡೆಯುವಂತಿರಬೇಕು’ ಎಂದು ಕೃಷಿ ವಿಸ್ತರಣಾ ಕೇಂದ್ರದ ಜಿಲ್ಲಾಧಿಕಾರಿ ಎಂ.ಬಿ ಪಾಟೀಲ ಹೇಳಿದರು.
ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ ಮತ್ತು ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಹಾಗೂ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಡೆದ ಸಮಗ್ರ ಕೃಷಿ ಪದ್ಧತಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಡುವಳಿಗೆ ತಕ್ಕಂತೆ ಬೆಳೆ ಯೋಜನೆ ರೂಪಿಸಿಕೊಳ್ಳಬೇಕು. ರೈತರು ಬೆಳೆಯ ಉತ್ಪಾದನೆಯ ಆಧಾರದ ಮೇಲೆ ಸಂಘಟಿತರಾಗಬೇಕು. ಹೀಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು’ ಎಂದರು.
‘ದೇಶದಲ್ಲಿನ ಕೃಷಿ ಉತ್ಪಾದನೆಯಲ್ಲಿ ಶೇ.25 ರಷ್ಟನ್ನಾದರೂ ಹೊರ ದೇಶಗಳಿಗೆ ರಫ್ತು ಮಾಡುವಂತಾಗಬೇಕು. ಆಗ, ರೈತರ ಬದುಕು ಕೂಡ ಸುಧಾರಿಸುತ್ತದೆ. ಅನೇಕ ದೇಶಗಳಲ್ಲಿ ನಮ್ಮ ದೇಶದ ಕೃಷಿ ಉತ್ಪನ್ನಗಳಿಗೆ ಬಹಳ ಬೇಡಿಕೆ ಇದೆ. ವಿದೇಶಗಳಿಗೆ ಪೂರೈಸುವ ಕೆಲಸವನ್ನು ಒಬ್ಬೊಬ್ಬರು ಮಾಡಲಾಗುವುದಿಲ್ಲ. ಸಂಘಗಳಿಗೆ ಸಾಧ್ಯವಿದೆ’ ಎಂದು ತಿಳಿಸಿದರು.
ಪಶು ವೈದ್ಯಾಧಿಕಾರಿ ಶಿವರಾಜ ಶೆಟ್ಟರ ಮಾತನಾಡಿ ಕುರಿ ಸಾಕಾಣಿಕೆ, ಕೋಳಿ, ಮೇಕೆ, ಮೊಲ ಮತ್ತು ಬಾತುಕೋಳಿ ಸಾಕಾಣಿಕೆಗಳ ಜತೆಗೆ ಹೈನುಗಾರಿಕೆ ಮುಂತಾದ ಪಶುಸಂಗೊಪನೆಗಳ ಬಗ್ಗೆ ಮಾಹಿತಿ ನೀಡಿದರು.
ಸರ್ವೋದಯ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ, ಗ್ರಾಮ ಪಂಚಾಯಿತಿ ಸದಸ್ಯ ರೇಣುಕಪ್ಪ, ಮುಖ್ಯ ಶಿಕ್ಷಕ ವಿರಭದ್ರಪ್ಪ ಕಮ್ಮಾರ್, ಭೀಮರಾವ್ ದೇಶಪಾಂಡೆ ಹಾಗೂ ಅಕ್ಕಮ್ಮ ಕೊಟಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.