ADVERTISEMENT

ನೀರುಗಳ್ಳತನದ ತಡೆಗೆ ರೈತರ ಆಗ್ರಹ; ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:57 IST
Last Updated 7 ಆಗಸ್ಟ್ 2023, 16:57 IST
ಕಾರಟಗಿಯ ನಂ. 2 ಕಾಲುವೆ ಉಪ ವಿಭಾಗದ ಕಚೇರಿಯ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು
ಕಾರಟಗಿಯ ನಂ. 2 ಕಾಲುವೆ ಉಪ ವಿಭಾಗದ ಕಚೇರಿಯ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು   

ಕಾರಟಗಿ: ಕಾಲುವೆ ಗ್ಯಾಂಗ್‌ಮನ್ ಸಹಕಾರದೊಂದಿಗೆ ಕಾಲುವೆ ನೀರು ಕಳ್ಳತನವಾಗುತ್ತಿದ್ದು, ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ನೀರು ಕಳ್ಳತನ ತಡೆಗಟ್ಟಿ, ಕೆಳಭಾಗದ ರೈತರಿಗೆ ನೀರು ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಪಟ್ಟಣದಲ್ಲಿರುವ ನಂಬರ್ 2 ಕಾಲುವೆ ಕಚೇರಿಗೆ ರೈತರು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಬೇಕು. ಕೆಳಭಾಗದ ರೈತರ ಜಮೀನುಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

32ನೇ ವಿತರಣಾ ಕಾಲುವೆ ವ್ಯಾಪ್ತಿಯ ಕಾರಟಗಿ, ಚನ್ನಳ್ಳಿ ಮತ್ತು ಕೊಂತನೂರು ಗ್ರಾಮದ ರೈತರು ಪ್ರತಿಭಟನೆ ನಡೆಸಿ, ಇಲಾಖೆಯ ಎಂಜಿನಿಯರ್‌ ಸುಬ್ರಹ್ಮಣ್ಯ ಅವರೊಂದಿಗೆ ಚರ್ಚೆ ನಡೆಸಿ, ಅಕ್ರಮ ನೀರುಗಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದರು.

ADVERTISEMENT

ನಾಲೆಯಲ್ಲಿ ತುಂಬಿರುವ ಹೂಳು ತಗೆಯಿಸಬೇಕು. ಗಿಡಗಂಟೆ ಸ್ವಚ್ಛಗೊಳಿಸಬೇಕು. ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.

ಎಂಜಿನಿಯರ್ ಸುಬ್ರಹ್ಮಣ್ಯ ಮಾತನಾಡಿ,  ನಮ್ಮ ನೇತೃತ್ವದ ತಂಡವು, ಭಾನುವಾರ ನೀರು ಕಳ್ಳತನ ಮಾಡಲು 32/3ರ ಉಪಕಾಲುವೆ ಮೇಲ್ಭಾಗದ ಬೇವಿನಾಳ, ಮೈಲಾಪುರ ಸೀಮೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ 14 ಪೈಪ್‌ಗಳನ್ನು ತೆರವುಗೊಳಿಸಿದೆ. ರೈತರಿಗೆ ನಿಯಮಾನುಸಾರ ಅವರ ಪಾಲಿನ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಗವಿಸಿದ್ದಪ್ಪ ಪನ್ನಾಪುರ ವಕೀಲ, ನಾರಾಯಣಪ್ಪ ಈಡಿಗೇರ, ಬೂದಿ ಗಿರಿಯಪ್ಪ, ಪಂಪಾಪತಿ ಪೂಜಾರ, ರಾಮಣ್ಣ ಬಡಿಗೇರ, ಸಂಜೀವಪ್ಪ ಸಾಲೋಣಿ, ಪರಸಪ್ಪ ಸುದ್ದಿ, ಲಿಂಗಪ್ಪ ರೌಡಕುಂದಿ, ಶರಣಪ್ಪ ದಿವಟರ, ಶಿವಪ್ಪ ಉದ್ಯಾಳ, ಚನ್ನಹಳ್ಳಿ ಮಲ್ಲಾರಡ್ಡಿ, ಬಸವರಾಜ ಹತ್ತಿಕಾಳ ಸಹಿತ ಅನೇಕ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.