ಯಲಬುರ್ಗಾ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ವಿವಿಧ ಬೆಳೆಗಳು ಸಮೃದ್ಧಿಯಾಗಿ ಬೆಳೆಯುತ್ತಿವೆ. ಅದಕ್ಕೆ ಪೂರಕವಾಗಿ ಗೊಬ್ಬರದ ಅವಶ್ಯಕತೆಯಿದ್ದು, ಬೇಡಿಕೆಗೆ ತಕ್ಕಂತೆ ಲಭ್ಯವಿಲ್ಲದೇ ಇರುವ ಕಾರಣ ರೈತರು ಪರದಾಡುವಂತಾಗಿದೆ.
ಗೊಬ್ಬರದ ಅಂಗಡಿಗಳ ಮುಂದೆ ವಿವಿಧ ಗ್ರಾಮಗಳ ರೈತರು ಬೆಳಿಗ್ಗೆ ಹಾಜರಾಗಿ ಸಾಲುಗಟ್ಟಿ ನಿಂತರೂ ಗೊಬ್ಬರ ದೊರೆಯುವುದೆಂಬ ನಂಬಿಕೆ ಇಲ್ಲದಂತಾಗಿದೆ. ತಾಲ್ಲೂಕಿನಲ್ಲಿ ಗೊಬ್ಬರದ ಕೊರತೆ ಕಾಣಿಸಿಕೊಂಡಿದ್ದರಿಂದ ರೈತರು ಪರಿತಪಿಸುವಂತಾಗಿದೆ.
ಉತ್ಪಾದನೆಯಿಲ್ಲದೇ ಇರುವ ಕಾರಣ ಪ್ರಸಕ್ತ ವರ್ಷದಲ್ಲಿ ಗೊಬ್ಬರದ ಕೊರತೆ ಉಂಟಾಗಿದೆ. ಯಾವುದೇ ರೀತಿಯಲ್ಲಿ ತಾಲ್ಲೂಕಿನ ರೈತರಿಗೆ ತೊಂದರೆಯಾಗದಿರಲಿ ಎಂದು ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ಸಂಪರ್ಕಿಸಿದರೂ ಲಭ್ಯವಾಗುತ್ತಿಲ್ಲ.
ಅಕ್ಕಪಕ್ಕದ ತಾಲ್ಲೂಕುಗಳಾದ ಗಂಗಾವತಿ ಮತ್ತು ಬಳ್ಳಾರಿಯಿಂದ ಗೊಬ್ಬರ ತರಿಸಿ ರೈತರಿಗೆ ವಿತರಣೆಗೆ ಮುಂದಾಗುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಆದರೂ ಇನ್ನೆರಡು ದಿನಗಳಲ್ಲಿ ಗೊಬ್ಬರವನ್ನು ವಿವಿಧ ಸಹಕಾರ ಸಂಘಗಳ ಮೂಲಕ ರೈತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ ನಾಗಲಾಪೂರಮಠ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.