ADVERTISEMENT

ಗವಿಸಿದ್ಧೇಶ್ವರ ಜಾತ್ರೆ: ಫಲಪುಷ್ಪ ಪ್ರದರ್ಶನಕ್ಕೆ ಸ್ಪಂದನೆ

ಗವಿಮಠ ಜಾತ್ರಾ ಮೈದಾನದಲ್ಲಿ ಮೇಳ

ಅನಿಲ್ ಬಾಚನಹಳ್ಳಿ
Published 15 ಜನವರಿ 2020, 11:29 IST
Last Updated 15 ಜನವರಿ 2020, 11:29 IST
ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಕೊಪ್ಪಳದ ಗವಿಮಠ ಜಾತ್ರಾ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರು
ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಕೊಪ್ಪಳದ ಗವಿಮಠ ಜಾತ್ರಾ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರು   

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ತೇರು ಮೈದಾನದಲ್ಲಿ ಆಯೋಜಿಸಿದ್ದ ಫಲ–ಪುಷ್ಪ ಪ್ರದರ್ಶನಕ್ಕೆ ಉತ್ತಮ ಜನಸ್ಪಂದನೆ ದೊರೆಯಿತು.

ಹಂಪಿಯ ಐತಿಹಾಸಿಕ ಕಲ್ಲಿನ ರಥ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಏಕತಾ ಪ್ರತಿಮೆ, ಜಿಲ್ಲೆಯ ರೈತರು ಬೆಳೆದ ವಿವಿಧ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ, ಯತಿಶ್ರೇಷ್ಠ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ರಂಗೋಲಿ, ಕಲಾವಿದ ಪ್ರಶಾಂತ ಮಂಡ್ನೆ ಅವರ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಮರಳಿನ ಕಲಾಕೃತಿ, ಧಾರವಾಡದ ಜಗದೀಶ ಬಾವಿಕಟ್ಟಿ ಅವರ ತೆಂಗಿನಕಾಯಿ ಕಲಾಕೃತಿಗಳು, ತರಕಾರಿಯಲ್ಲಿ ವಿವಿಧ ಮಾದರಿದ ಕೆತ್ತನೆಗಳು, ಅಲಂಕಾರಿಕ ಹೂಗಳು ಹಾಗೂ ಸಸ್ಯಗಳ ಪ್ರದರ್ಶನ ಈ ವರ್ಷದ ಫಲ–ಪುಷ್ಪ ಪ್ರದರ್ಶನ ಮೇಳದ ಆಕರ್ಷಣೆಗಳಾಗಿವೆ.

ಫಲ ಪುಷ್ಪ ಪ್ರದರ್ಶನ ಮೇಳದಲ್ಲಿ ಹರೀಶ ಅವರ ಕೈಚಳದಲ್ಲಿ ಅರಳಿದ ಹೂವಿನ ಹಂಪಿಯ ಕಲ್ಲಿನ ರಥಪ್ರದರ್ಶನದ ಕೇಂದ್ರ ಬಿಂದು ಆಗಿದೆ. ಇದಕ್ಕೆ 50 ವಿವಿಧತರಹೇವಾರಿ ಹೂವುಗಳನ್ನು ಬಳಕೆ ಮಾಡಲಾಗಿದೆ. 8 ಕ್ವಿಂಟಲ್‌ ಹೂವುಗಳನ್ನು ಬಳಕೆ ಮಾಡಿದ್ದು, ಇದರಲ್ಲಿ ಸುಮಾರು 5 ಕ್ವಿಂಟಲ್‌ ವಿವಿಧ ಬಣ್ಣದ ಗುಲಾಬಿಗಳು ಸೇರಿವೆ. ಸೇವಂತಿಗೆ, ಚೆಂಡು ಹೂ ಬಳಸಲಾಗಿದೆ. ಅಲ್ಲದೇ ವಿಶೇಷ ಹಾಗೂ ವಿದೇಶಿ ಹೂವು ಕೂಡ ಬಳಕೆ ಮಾಡಿರುವುದು ವಿಶೇಷ.

ADVERTISEMENT

ಜಿಫ್ಸೋಫಿಲಾ, ಡಂಡ್ಯೋಬಿಯಂ, ಅಂತೋರಿಯಂ, ಕಾರ್ನೆಷನ್‌, ಫೆಟೋನಿಯಾ, ಡಯಾಂತಸ್‌, ಜರೇನಿಯಂ, ಡೈಸಿ, ಬರ್ಡ್‌ ಆಫ್‌ ಪ್ಯಾರಿಡೈಸ್‌, ಟೋರೆನಿಯಾ, ಯುಫೋರ್‌ ಬಿಎಸಿ ಜಾತಿಯ ಅನೇಕ ಹೂವುಗಳು ಹಾಗೂ ವಿವಿಧ ಬಣ್ಣದ ಜರಬೇರಾ ಹೂಗಳು ಸೇರಿ
ಒಟ್ಟು 5–6 ತರಹದ ವಿದೇಶಿಗಳ ಬಳಕೆ ಮಾಡಿ, ಹಂಪಿಯ ಕಲ್ಲಿನ ರಥವನ್ನೂ ನಿರ್ಮಿಸಿರುವುದು ಮೆಚ್ಚುಗೆ ಗಳಿಸಿದೆ.

ಥರ್ಮಕೋಲ್‌ನಿಂದ ನರ್ಮಾದ ತೀರದಲ್ಲಿ ನಿರ್ಮಿಸಲಾದ ಏಕತಾ ಪ್ರತಿಮೆಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಮಾದರಿ
ಎಲ್ಲರ ಗಮನ ಸೆಳೆದಿದೆ. ಇವು ಗಳನ್ನು ಹೊರತು ಪಡಿಸಿದರೆ ವಿಷ ಮತ್ತು ರಾಸಾಯನಿಕ ಮುಕ್ತ ಉತ್ಪಾದನೆಗಾಗಿ ಜಲಕೃಷಿ ಮಾದರಿ ಹಾಗೂ ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆ ಬಿಂಬಿಸುವ ಫ್ಲೆಕ್ಸ್‌ಹಾಗೂ ಬ್ಯಾನರ್‌ ಹಾಕಲಾಗಿದ್ದು, ಈ ಮೂಲಕ ತೋಟಗಾರಿಕಾ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಜಗದೀಶ ಬಾವಿ ಕಟ್ಟಿ ಅವರ ತೆಂಗಿನ ಕಾಯಿಯ ಕಲಾಕೃತಿಯಲ್ಲಿ ವಿವಿಧ ದೇಶಭಕ್ತರ, ಗಣ್ಯರ ಆಕೃತಿ ಮೂಡಿ ಚಕಿತಗೊಳಿಸುವಂತೆ ಮಾಡುವ ಕಲೆ ಆಕರ್ಷಕವಾಗಿದೆ. ಫಲ ‍ಪುಷ್ಪ ಪ್ರದರ್ಶನಕ್ಕೆ 2–3 ತಿಂಗಳಿನಿಂದಲೂ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು. ಇದಕ್ಕಾಗಿ ಸುಮಾರು ₹ 5–6 ಲಕ್ಷ ವ್ಯಯಿಸಲಾಗಿದೆ. ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.