ಕುಕನೂರು: ಜಾನಪದದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜಾನಪದವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು ಹಾಗೂ ಜಾನಪದ ಮುಂದಿನ ಪೀಳಿಗೆಗೆ ದೊರೆಯುವಂತೆ ಮಾಡಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಕರೆ ನೀಡಿದರು.
ತಾಲ್ಲೂಕಿನ ತಳಕಲ್ ಗ್ರಾಮದ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಪ್ರದರ್ಶನ ಕಲೆ ವಿಭಾಗವನ್ನು ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದೇಶಿಯರೆಲ್ಲ ಭಾರತೀಯ ಕಲಾ ಶ್ರೀಮಂತಿಕೆಗೆ ತಲೆ ತೂಗಿದ್ದಾರೆ. ಕಲೆ ರಕ್ತವಾಗಿದ್ದು, ಒಂದಷ್ಡು ಆಸಕ್ತಿ ವಹಿಸಿದಲ್ಲಿ ಕಲೆಯಲ್ಲಿ ನೈಪುಣ್ಯತೆ ದೊರೆಯಲಿದೆ. ಕಾರಣ ಎಲ್ಲರೂ ಈ ಕಲೆಯ ಶ್ರೀಮಂತಿಕೆಯನ್ಮು ಹೆಚ್ಚಿಸಲು ಶ್ರಮಿಸಬೇಕು ಎಂದರು.
ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪ್ರದರ್ಶನ ಕಲೆ ವಿಭಾಗವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಈ ನಾಡಿನ ಜನರ ಪ್ರದರ್ಶನ ಕಲೆಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಪ್ತದರ್ಧನ ಕಲೆಯು ನಾಡಿನ ಸಂಸ್ಕೃತಿ, ಪರಂಪರೆಯನ್ನು ಬೆಳೆಸುವ ಕಲೆಯಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಂಸಾಳೆ ನೃತ್ಯ ರೂಪಕ ಪ್ರದರ್ಶನ ನಡೆಯಿತು. ಗಾಯಕಿ ಗೌರಿ ತಂಡದವರು ಹಲವು ಜಾನಪದ ಗೀತೆಗಳನ್ನು ಹಾಡಿದರು.