
ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ (ಹರಿಜನ) ಏರಿಯಾದಲ್ಲಿರುವ ಸಮುದಾಯ ಶೌಚಾಲಯ ದುರಸ್ತಿ ಕಾರ್ಯ ಸ್ಥಳಕ್ಕೆ ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಏರಿಯಾದ ದ್ಯಾಮವ್ವ ದೇವಸ್ಥಾನದ ಬಳಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ,‘ಏರಿಯಾದಲ್ಲಿನ ಸಮುದಾಯ ಶೌಚಾಲಯ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಬೇಗ ಶೌಚಾಲಯ ಬಳಕೆಗೆ ಲಭ್ಯವಾಗಲಿದೆ. ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗಬಾರದು. ಇದರಿಂದ ಪರಿಸರ ಮಲಿನವಾಗಲಿದೆ. ಎಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಂತರ ಗ್ರಾಮಸ್ಥರು,‘ನಿವೇಶನಗಳು ಬಂದಿಲ್ಲ. ಕೆಲ ನಿವೇಶನಗಳಿಗೆ ಕಂತಿನ ಹಣ ಬಂದಿಲ್ಲ. ಶೌಚಾಲಯಗಳಿಗೆ ಅರ್ಜಿ ಸಲ್ಲಿಸಿದರೂ ಈವರೆಗೆ ಅನುಮೋದನೆ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಅಧಿಕಾರಿಗಳು 21 ಮಹಿಳಾ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕಾಮಗಾರಿ ಮಂಜೂರಾತಿ ಆದೇಶ ಪತ್ರ ನೀಡಿದರು.
ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಪ್ರಭಾರ ಪಿಡಿಒ ರವೀಂದ್ರ, ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಯಂಕೋಬ, ಸದಸ್ಯ ಶಾಂತಪ್ಪ, ಗ್ರಾಮಸ್ಥರಾದ ರಾಜಶೇಖರ, ರಮೇಶ, ಹುಲಿಗೆಮ್ಮ, ಭರಮಮ್ಮ, ಈರಮ್ಮ, ಚನ್ನಮಲ್ಲಮ್ಮ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.