ಕಾರಟಗಿ: ಗಿಣಿಗೇರಾ-ರಾಯಚೂರು ರೈಲು ಸಂಪರ್ಕ ಕಾಮಗಾರಿ ಕಾರಟಗಿವರೆಗೆ ಪೂರ್ಣಗೊಂಡಿದ್ದು, ಬುಧವಾರದಿಂದ ರೈಲು ಸಂಚಾರ ಆರಂಭವಾಗಲಿದೆ.
ಎರಡು ದಶಕದ ಬಳಿಕ ಕನಸು ನನಸಾಗುತ್ತಿರುವುದಕ್ಕೆ ಪಟ್ಟಣದ ನಿವಾಸಿಗಳು ಹರ್ಷಗೊಂಡಿದ್ದಾರೆ.
1997-98ರಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರೈಲು ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿದರು. ರೈಲು ಹಳಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ವೇಗವಾಗಿ ಪೂರ್ಣಗೊಳಿಸಲು ಆಗಿನ ಸಂಸದ ಬಸವರಾಜ ರಾಯರಡ್ಡಿ, ಶಾಸಕ ಸಂಗಣ್ಣ ಕರಡಿ ಒತ್ತು ನೀಡಿದರು. ಸಂಸದರಾಗಿದ್ದ ಎಚ್.ಜಿ.ರಾಮುಲು, ಕೆ. ವಿರೂಪಾಕ್ಷಪ್ಪ ಮತ್ತು ಶಿವರಾಮಗೌಡ ಶ್ರಮಿಸಿದರು.
ಕಾಮಗಾರಿ 7 ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು, ಗಂಗಾವತಿಯಿಂದ ಕಾರಟಗಿಯವರೆಗೆ ರೈಲಿನ ಪ್ರಯೋಗಾತ್ಮಕ ಸಂಚಾರ ಮತ್ತು ತಾಂತ್ರಿಕ ಪರೀಕ್ಷೆಯು ಆಗಿದೆ. ಎಲ್ಲಾ ಹಂತದ ಪರೀಕ್ಷೆಗಳನ್ನು ನೈರುತ್ಯ ರೈಲ್ವೆ ವಲಯ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ಕೊರೊನಾ ಕಾರಣಕ್ಕೆ ಪೂರ್ಣಪ್ರಮಾಣದ ರೈಲು ಸಂಚಾರ ವಿಳಂಬವಾಗಿತ್ತು ಎಂದು ಮೂಲಗಳು ತಿಳಿಸಿವೆ.
ರೈಲು ಸಂಖ್ಯೆ (07303/04) ಕಾರಟಗಿ-ಹುಬ್ಬಳ್ಳಿ ಎಕ್ಸ್ಪ್ರೆಸ್, (07381/02) ಕಾರಟಗಿ-ಹುಬ್ಬಳ್ಳಿ ಪ್ಯಾಸೆಂಜರ್, (06207/08) ಕಾರಟಗಿ-ಯಶವಂತಪುರಕ್ಕೆ ರೈಲುಗಳ ಸಂಚಾರ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.