
ಗಂಗಾವತಿ: ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಡಿ. 2 ಹಾಗೂ 3ರಂದು ನಡೆಯಲಿರುವ ಹಿನ್ನಲೆಯಲ್ಲಿ ಆನೆಗೊಂದಿ ಪೆಟ್ರೋಲ್ ಬಂಕ್, ಚಿಕ್ಕರಾಂಪುರ ಗ್ರಾಮದ ಜಮೀನುಗಳಲ್ಲಿ ಶುಕ್ರವಾರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ.
ಬೆಳಿಗ್ಗೆ ನಗರಠಾಣೆ ಎಎಸ್ಐ ಶಿವಶರಣಪ್ಪ ನೇತೃತ್ವದಲ್ಲಿ ಮಲ್ಲಾಪುರ ಗ್ರಾಮ ಲೆಕ್ಕಿಗ ಸೋಮನಾಥ ಮತ್ತು ಗ್ರಾಮ ಸಹಾಯಕರು ಪಾರ್ಕಿಂಗ್ ವ್ಯವಸ್ಥೆ ಕೆಲಸ ಆರಂಭಿಸಿದರು. ಆನೆಗೊಂದಿ ಪೆಟ್ರೋಲ್ ಬಂಕ್ ಹಿಂಬದಿಯ ಜಮೀನಿಗೆ ಜೆಸಿಬಿ ವಾಹನಗಳಿಂದ ದಾರಿ ಮಾಡಿಸಿದರು. ಜಮೀನಿನಲ್ಲಿ ಬೆಳೆದ ಸಣ್ಣ-ಪುಣ್ಣ ಗಿಡಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಿದರು.
ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಒಟ್ಟು 28 ಪಾರ್ಕಿಂಗ್ ಸ್ಥಳ ಗುರುತಿಸಿದ್ದು, ಶರವೇಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಾರ್ಯ ನಡೆದಿದೆ.
ಎಸ್.ಪಿ. ಸಭೆ: ‘ಹನುಮಮಾಲಾ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹೇಳಿದರು.
ಜಿಲ್ಲಾಕೇಂದ್ರದ ಎಸ್.ಪಿ. ಕಚೇರಿಯಲ್ಲಿ ಗುರುವಾರ ಇಲಾಖೆ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ ಅವರು ‘ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ಜರುಗಲಿರುವ ಪವಮಾನ ಹೋಮಯಾಗಕ್ಕೆ ಅಚ್ಚುಕಟ್ಟಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ, ಜೆಸ್ಕಾಂ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಲೋಕೋಪಯೋಗಿ ಇಲಾಖೆಗಳ ಪಾತ್ರ ಬಹಳ ಇದ್ದು, ಯಾವುದೇ ಒಂದು ಇಲಾಖೆಯು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ ನಮ್ಮ ಪೊಲೀಸ್ ಇಲಾಖೆಗೆ ಹೊಡೆತ ಬೀಳುತ್ತದೆ. ಹಾಗಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಗಂಗಾವತಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ, ಕೊಪ್ಪಳ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸೀನಯ್ಯ, ಗಂಗಾವತಿ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕ ರಾಜಶೇಖರ, ಅರಣ್ಯ ಇಲಾಖೆಯ ಎಸಿಎಫ್ ಮುಲ್ಲಾ ಎ.ಎಚ್., ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ. ಎಸ್. ಹಿರೇಮಠ ಪಾಲ್ಗೊಂಡಿದ್ದರು.
ಹನುಮಮಾಲಾ ವಿಸರ್ಜನೆಗೆ ವಿವಿಧ ಸಮಿತಿ ರಚಿಸಲಾಗಿದ್ದು ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲವಾದರೆ ತಪ್ಪಿತಸ್ಥರನ್ನೇ ಹೊಣೆ ಮಾಡಲಾಗುವುದು.–ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.