ಕೊಪ್ಪಳ: ಜಿಲ್ಲೆಯಾದ್ಯಂತ ಸೋಮವಾರ ತಡರಾತ್ರಿಯಿಂದಲೇ ರಭಸದ ಮಳೆ ಸುರಿಯುತ್ತಿದ್ದು, ಗಂಗಾವತಿ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿಗೆ ರಜೆ ಘೋಷಣೆ ಮಾಡಿದೆ.
ಗಂಗಾವತಿ ತಾಲ್ಲೂಕಿನ ಸಾಣಪುರ ಗ್ರಾಮದಲ್ಲಿ ಬೆಟ್ಟಗುಡ್ಡಗಳಿಂದ ನೀರು ಹರಿದು ಬಂದು ಭತ್ತದ ಜಮೀನುಗಳು ಜಲಾವೃತವಾಗಿ, ನಾಟಿ ಮಾಡಿದ ಸಸಿಗಳೆಲ್ಲ ಕಿತ್ತುಹೋಗಿವೆ.
ಗ್ರಾಮದ ಸಣ್ಣ ಕಾಲುವೆಗಳು ತುಂಬಿ ಹರಿಯುತ್ತಿವೆ. ಗ್ರಾಮದ ಚರಂಡಿಗಳಲ್ಲಿ ರಭಸವಾಗಿ ನೀರು ಹರಿಯುತ್ತಿವೆ.
ತಡರಾತ್ರಿಯಿಂದ ಮಳೆ ಸುರಿಯುತ್ತಿರುವ ಕಾರಣ ಗ್ರಾಮದ ರಸ್ತೆಗಳ ಮೇಲೆ ನೀರು ಹರಿಯುತ್ತಿವೆ. ಹಾಗೆ ಕೆಲ ಮಣ್ಣಿನ ಮನೆಗಳು ಬಿರುಕುಬಿಟ್ಟರೆ, ಕೆಲ ಗುಡಿಸಲುಗಳ ಗೋಡೆ ನೆಲಕ್ಕೆ ವಾಲಿವೆ.
ಕುಕನೂರು, ಮುನಿರಾಬಾದ್, ತಾವರಗೇರಾ, ಕನಕಗಿರಿ, ಕುಷ್ಟಗಿ, ಅಳವಂಡಿ ಹಾಗೂ ಹನುಮಸಾಗರ ಭಾಗದಲ್ಲಿ ಮಂಗಳವಾರ
ಬೆಳಿಗ್ಗೆ 5 ಗಂಟೆಯಿಂದ ನಿರಂತರ ಮಳೆ ಬೀಳುತ್ತಿದ್ದು, ನಾಗರ ಪಂಚಮಿ ಹಬ್ಬ ಆಚರಣೆಗೆ ಅಡಚಣೆಯಾಗಿದೆ. ಹೆಸರು ಬೆಳೆಗಳು ಮೊಳಕೆ ಬಂದಿದ್ದು, ಅತಿಯಾದ ತೇವಾಂಶದಿಂದ ಮೆಕ್ಕೆಜೋಳ ಲದ್ದಿ ಹುಳುಗಳ ಕಾಟ ಶುರುವಾಗಿದೆ.
ಕೊಪ್ಪಳದಲ್ಲಿಯೂ ಸೋಮವಾರ ಸಂಜೆ ಕೆಲಸಮಯ ಜಿಟಿಜಿಟಿ ಮಳೆ ಸುರಿದಿತ್ತು. ಇಲ್ಲಿಯೂ ಬೆಳಗಿನ ಜಾವದಿಂದಲೇ ಮಳೆ ಸುರಿಯುತ್ತಿದೆ.
ಜಿಲ್ಲೆಯ ವೆಂಕಟಗಿರಿಯಲ್ಲಿ 3.68 ಸೆಂ.ಮೀ., ಕೊಪ್ಪಳದಲ್ಲಿ 2.24 ಸೆಂ.ಮೀ., ಕುಷ್ಟಗಿಯಲ್ಲಿ 3 ಮೀ.ಮೀ. ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.