ADVERTISEMENT

ಪಾಳು ಬಿದ್ದ ಪಾರಂಪರಿಕ ಕಟ್ಟಡ, ಐತಿಹಾಸಿಕ ಕಟ್ಟಡದತ್ತ ನಿರ್ಲಕ್ಷ್ಯ: ಆರೋಪ

ನಾರಾಯಣರಾವ ಕುಲಕರ್ಣಿ
Published 29 ನವೆಂಬರ್ 2020, 13:46 IST
Last Updated 29 ನವೆಂಬರ್ 2020, 13:46 IST
ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಭೂತ ಬಂಗಲೆಯಂತಾಗಿದೆ
ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಭೂತ ಬಂಗಲೆಯಂತಾಗಿದೆ   

ಕುಷ್ಟಗಿ: ದಶಕಗಳವರೆಗೆ ತಹಶೀಲ್ದಾರ್ ಕಚೇರಿಯಾಗಿದ್ದ ಐತಿಹಾಸಿಕ ಹಿನ್ನೆಲೆಯುಳ್ಳ ಪಾರಂಪರಿಕ ಕಟ್ಟಡ ಈಗ ಪಾಳು ಬಿದ್ದಿದೆ. ಅದರ ಅಭಿವೃದ್ಧಿ, ಸಂರಕ್ಷಣೆ ಸಂಬಂಧಿಸಿದಂತೆ ಯಾವುದೇ ರೀತಿ‌ ಕಾರ್ಯ ನಡೆದಿರುವುದು ಕಾಣಸಿಗುವುದಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿ ಸದ್ಯ ಹಳೆಯ ಕಡತಗಳ ಗಂಟುಮೂಟೆಗಳನ್ನು ಮತ್ತು ಸಾಮಗ್ರಿಗಳನ್ನು ಇಡಲಾಗಿದೆ. ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ಪಕ್ಕದಲ್ಲೇ ಮಿನಿ ವಿಧಾನಸೌಧ ನಿರ್ಮಾಣಗೊಂಡ ಬಳಿಕ ಈ ಕಟ್ಟಡದ ಬಳಕೆ ಕ್ರಮೇಣ ಕಡಿಮೆಯಾಯಿತು.

ಹತ್ತಾರು ಕೊಠಡಿಗಳು, ಉದ್ದನೆ ಮೊಗಸಾಲೆ, ಆವರಣ ಹೊಂದಿರುವ ಈ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಅಲ್ಲದೇ ಉಪ ಖಜಾನೆ, ಉಪ ನೋಂದಣಾಧಿಕಾರಿ ಕಚೇರಿ ಇತ್ತು. ಶಾಸಕರ ಸರ್ಕಾರಿ ಕಚೇರಿ ಇಲ್ಲಿಯೇ ತೆರೆಯಲಾಗಿತ್ತು. ಕೆಲ ವರ್ಷಗಳವರೆಗೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವೂ ಇಲ್ಲಿತ್ತು.‌

ADVERTISEMENT

‘ಕಟ್ಟಡ ಆವರಣವು ದುರ್ನಾತ ಬೀರುತ್ತಿದೆ. ಅಲ್ಲಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಮದ್ಯದ ಬಾಟ್ಲಿಗಳು ಬಿಸಾಡಿಲ್ಪಟ್ಟಿವೆ. ಕಿಡಿಗೇಡಿಗಳು ಈ ಕಟ್ಟಡವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ನಿವಾಸಿಗಳದ ಬಸವರಾಜ ಪಾಟೀಲ, ವೀರಭದ್ರಪ್ಪ ಗುರಿಕಾರ ಬೇಸರ ವ್ಯಕ್ತಪಡಿಸುತ್ತಾರೆ.

‘ಹೆಚ್ಚುವರಿ ಮಿನಿ ವಿಧಾನಸೌಧ ನಿರ್ಮಿಸುವ ಅಗತ್ಯವಿದೆ. ಇದನ್ನು ಹಿಂದಿನ ಮತ್ತು ಈಗಿನ ಸರ್ಕಾರದ ಗಮನಕ್ಕೆ ತರಲಾಗಿದೆ. ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹಳೆಯ ಕಟ್ಟಡ ತೆರವಿಗೆ ಅನುಮತಿ ಪಡೆಯಬೇಕು. ಹೊಸ ಕಟ್ಟಡ ನಿರ್ಮಾಣಗೊಂಡಲ್ಲಿ, ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳನ್ನು ಇಲ್ಲಿ ಸ್ಥಳಾಂತರಿಸಬಹುದು’ ಎಂದು ಶಾಸಕ‌ ಅಮರೇಗೌಡ ಬಯ್ಯಾಪುರ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.