ADVERTISEMENT

ಅಂಜನಾದ್ರಿಯಲ್ಲಿ ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ಬೇಡ: ಹಿಂದೂಜಾಗರಣ ವೇದಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 12:32 IST
Last Updated 28 ನವೆಂಬರ್ 2022, 12:32 IST
ಅಂಜನಾದ್ರಿಗೆ ಹೋಗುವ ಮಾರ್ಗದಲ್ಲಿ ಫಲಕ ಹಾಕಿರುವ ಹಿಂದೂ ಜಾಗರಣ ವೇದಿಕೆ
ಅಂಜನಾದ್ರಿಗೆ ಹೋಗುವ ಮಾರ್ಗದಲ್ಲಿ ಫಲಕ ಹಾಕಿರುವ ಹಿಂದೂ ಜಾಗರಣ ವೇದಿಕೆ   

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲು ಹಿಂದೂ ಧರ್ಮದವರನ್ನು ಹೊರತುಪಡಿಸಿ ಬೇರೆ ಯಾರಿಗೂ ವ್ಯಾಪಾರ ನಡೆಸಲು ಅವಕಾಶ ಕೊಡಬಾರದು ಎಂದು ಹಿಂದೂ ಜಾಗರಣ ವೇದಿಕೆಯು ಜಿಲ್ಲಾಧಿಕಾರಿ ಹಾಗೂ ಗಂಗಾವತಿ ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದೆ.

ಅಂಜನಾದ್ರಿ ಪರ್ವತ ಹಿಂದೂಗಳ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ದೇಶ ಹಾಗೂ ವಿದೇಶಗಳಿಂದ ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿದೆ. ಕಾಯಿ, ಕರ್ಪೂರ, ಹಣ್ಣುಗಳು ಸೇರಿದಂತೆ ಅನೇಕ ಪೂಜಾ ಸಾಮಗ್ರಿಗಳನ್ನು ಮತ್ತು ಹೋಟೆಲ್‌ಗಳು ಅಲ್ಲಿವೆ. ಇವುಗಳಲ್ಲಿ ವ್ಯಾಪಾರ ನಡೆಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು. ಇಂಥ ಪವಿತ್ರ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರಿಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ವ್ಯಾಪಾರ ವಹಿವಾಟಿನ ನೆಪದಲ್ಲಿ ಮುಸ್ಲಿಂ ಉಗ್ರರು ಧಾರ್ಮಿಕ ಕ್ಷೇತ್ರಗಳಿಗೆ ಲಗ್ಗೆ ಹಾಕಿ ಆತಂಕ ಮೂಡಿಸುತ್ತಿದ್ದಾರೆ. ಒಂದು ವೇಳೆ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ ಹೋರಾಟ ಮಾಡಲಾಗುವುದು ಎಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಸಂಜೀವ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಕುರಿತು ಜಾಗರಣಾ ವೇದಿಕೆ ಅಂಜನಾದ್ರಿಗೆ ಹೋಗುವ ಮಾರ್ಗದಲ್ಲಿ ಪ್ರಕಟಣೆಗಳನ್ನು ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.