
ಕೊಪ್ಪಳ: ‘ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ಉಳಿಸಿಕೊಂಡಿಲ್ಲ. ಆದರೆ ಅದನ್ನು ನಂಬಿ ಈವರೆಗೆ ಹೋರಾಟ ಮಾಡುತ್ತಿದ್ದೇವೆ’ ಎಂದು ಸಾಮಾಜಿಕ ಹೋರಾಟಗಾರ ಕೆ.ಫಣಿರಾಜ್ ವಿಷಾದ ವ್ಯಕ್ತಪಡಿಸಿದರು.
ಶನಿವಾರ ನಡೆದ ‘ಸಂವಿಧಾನದ ಚಿಂತನೆಗಳು’ ಕುರಿತ ಮೊದಲ ಗೋಷ್ಠಿಯಲ್ಲಿ ‘ಭಾರತದಲ್ಲಿನ ಕೋಮುರಾಜಕಾರಣದ ಇತಿಹಾಸ’ದ ಕುರಿತು ಮಾತನಾಡಿ ‘ಸಂಘ ಪರಿವಾರವು ಎಲ್ಲ ವಲಯವನ್ನೂ ವ್ಯಾಪಿಸಿದ್ದು, ಈವರೆಗೆ ಆರ್ಎಸ್ಎಸ್ 75 ಸಂಘಟನೆಗಳನ್ನು ಸ್ಥಾಪಿಸಿದೆ. ಇದರ ಪರಿಣಾಮವಾಗಿ ಹಿಂದೂ ರಾಷ್ಟ್ರವಾದದ ಪರಿಕಲ್ಪನೆ ಎಲ್ಲೆಡೆ ಬೇರೂರಿದೆ. ಹಿಂದೂತ್ವ ಯಾವ ಬಗೆಯಲ್ಲಿ ಎಲ್ಲ ವಲಯಗಳನ್ನು ಬಾಧಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ’ ಎಂದು ಹೇಳಿದರು.
‘ಮತೀಯ ಮತ್ತು ಜಮೀನ್ದಾರಿ ವ್ಯವಸ್ಥೆ ಪರ ಇರುವ ಸಂಘ ಪರಿವಾರ, ಆರಂಭದಿಂದಲೇ ಸಂವಿಧಾನದ ವಿರೋಧಿ ಆಶಯಗಳನ್ನು ಹೊಂದಿದೆ. ಮುಸ್ಲಿಂ, ಕ್ರಿಶ್ಚಿಯನ್ನರ ಬಗ್ಗೆ ಸಮಾಜದಲ್ಲಿ ಭಯ ಮೂಡಿಸಿ ಹಿಂದೂಗಳನ್ನು ಒಗ್ಗೂಡಿಸುವ ತಂತ್ರಗಾರಿಕೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.
‘ಸಂವಿಧಾನ ಪೀಠಿಕಾ ಭಾಗ, ಆದರ್ಶ- ಅವಲೋಕನ’ ಕುರಿತು ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರು ಮಾತನಾಡಿ ‘ಹಿಂದೂ ಎಂಬ ಪದ ಅಥವಾ ಧರ್ಮವು ಬಿಜೆಪಿ ಅಥವಾ ಸಂಘ ಪರಿವಾರದ ಆಸ್ತಿಯಲ್ಲ; ಭಾರತದ ಸಂವಿಧಾನ ಒಂದು ವೇಳೆ ಒಬಿಸಿ ಅಥವಾ ದಲಿತರಿಗೆ ಸವಲತ್ತು ಕೊಟ್ಟಿರದಿದ್ದರೆ, ಹಿಂದೂ ಧರ್ಮ ಉಳಿಯುತ್ತಿರಲಿಲ್ಲ. ಆ ಬಗ್ಗೆಯೂ ಯೋಚಿಸಬೇಕು. ಹಿಂದೂ ಧರ್ಮದ ಬಗ್ಗೆ ಬಿಜೆಪಿಗೆ ಒಲವಿಲ್ಲ. ಅದೊಂದು ಮತಗಳಿಕೆಯ ಅಸ್ತ್ರವಷ್ಟೇ’ ಎಂದು ವಿವರಿಸಿದರು.
ರಾಜಶೇಖರ ನಾರನಾಳ, ಸವಿತಾ ಅಂಗಡಿ, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಉಪಸ್ಥಿತರಿದ್ದರು. ಪತ್ರಕರ್ತ ಶರಣಪ್ಪ ಬಾಚಲಾಪುರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.