ಹುಲಿಗಿ (ಮುನಿರಾಬಾದ್): ಜಿಲ್ಲೆಯ ಪ್ರತಿಷ್ಠಿತ ದೇವಾಲಯ ಹುಲಿಗಿಯ ಹುಲಿಗೆಮ್ಮದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ವಿಧಿವಿಧಾನಗಳು ಭಾನುವಾರ ನಡೆದ ‘ಪಾಯಸ ಪವಾಡ’ ಕಾರ್ಯಕ್ರಮದೊಂದಿಗೆ ಮುಕ್ತಾಯವಾದವು.
ಕೋವಿಡ್ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತ ಸರಳ ಜಾತ್ರೆಗೆ ಅವಕಾಶ ನೀಡಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ಜಿಲ್ಲಾಧಿಕಾರಿ ಆದೇಶದಂತೆ ಕಳೆದ ಬುಧವಾರ (ಜೂನ್ 2) ಲಘು ರಥೋತ್ಸವ, ಗುರುವಾರ ಅಕ್ಕಿಪಡಿ ನಂತರ ದೇವಸ್ಥಾನ ಆವರಣದಲ್ಲಿ ಮಂಗಳವಾದ್ಯ ಸಮೇತ ಸರಳ ರಥೋತ್ಸವ, ಶುಕ್ರವಾರ ಮತ್ತು ಶನಿವಾರ ಕೊಂಡದ ಪೂಜೆ, ಗಂಗಾದೇವಿ ಪೂಜೆ, ಬಾಳಿ ದಂಡಿಗೆ ಬೆಳಿಗ್ಗೆ ಶ್ರೀದೇವಿಗೆ ಪಾಯಸ ನೈವೇದ್ಯ ನಿವೇದನೆ ಹಾಗೂ ಅಗ್ನಿಕುಂಡ ಕಾರ್ಯಕ್ರಮಗಳು ನಡೆದವು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಅರ್ಚಕರು ಮತ್ತು ಪರಂಪರಾಗತ ಪೂಜಾರಿ ಹಾಗೂ ಪಾಯಸ ಮನೆತನದವರು ಗ್ರಾಮದ ಕೆಲವೇ ಗಣ್ಯವ್ಯಕ್ತಿಗಳು ಮತ್ತು ದೇವಸ್ಥಾನ ಸಿಬ್ಬಂದಿ ಜಾತ್ರಾ ವಿಧಿವಿಧಾನಗಳನ್ನು ನೆರವೇರಿಸಿದರು.
ಸಾರ್ವಜನಿಕರಿಗೆ ದೇವಿಯ ದರ್ಶನ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಲಾಕ್ಡೌನ್ ಪರಿಣಾಮ ಕಳೆದ ವರ್ಷ ಕೂಡ ಜಾತ್ರೆ ನಿಷೇಧಿಸಲಾಗಿತ್ತು.
ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ಕೂಡ ದೇವಿಗೆ ಕಾಯಂ ಭಕ್ತರು ಇದ್ದಾರೆ. ಪ್ರತಿವರ್ಷ ವಾರ್ಷಿಕ ಜಾತ್ರೆಯಲ್ಲಿ ಸುಮಾರು 3-4 ಲಕ್ಷ ಜನ ಭಕ್ತಾದಿಗಳು ಸೇರಿ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕೋವಿಡ್ ಕಾರಣ ಜಾತ್ರೆಯ ಸಂಭ್ರಮ ಕಂಡುಬರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.