ADVERTISEMENT

28ರಂದು ಹುಲಿಗೆಮ್ಮ ದೇವಿಯ ರಥೋತ್ಸವ: ಒಂದೇ ಸೂರಿನಡಿ ವಸತಿ ಸಮುಚ್ಛಯ ನಿರ್ಮಾಣ

ಮೇ 19ರಿಂದ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ

ಸಿದ್ದನಗೌಡ ಪಾಟೀಲ
Published 3 ಮೇ 2019, 20:00 IST
Last Updated 3 ಮೇ 2019, 20:00 IST
ಕೊಪ್ಪಳ ತಾಲ್ಲೂಕಿನ ಹುಲಿಗಿ ದೇವಸ್ಥಾನದ ಎದುರು ನಿರ್ಮಾಣವಾಗುತ್ತಿರುವ 8 ಅಂತಸ್ತಿನ ಸಮುಚ್ಛಯ
ಕೊಪ್ಪಳ ತಾಲ್ಲೂಕಿನ ಹುಲಿಗಿ ದೇವಸ್ಥಾನದ ಎದುರು ನಿರ್ಮಾಣವಾಗುತ್ತಿರುವ 8 ಅಂತಸ್ತಿನ ಸಮುಚ್ಛಯ   

ಕೊಪ್ಪಳ:ಈ ಭಾಗದ ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಶ್ರದ್ಧಾ ಕೇಂದ್ರವಾದ ಹುಲಿಗೆಯಹುಲಿಗೆಮ್ಮ ದೇವಿಯ ಮಹಾರಥೋತ್ಸವ ಮೇ 28ರಂದು ನಡೆಯಲಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಹಲವು ಸೌಲಭ್ಯ ಕಲ್ಪಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ.

ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಪ್ರತಿ ತಿಂಗಳು ಕೋಟಿಗಟ್ಟಲೆ ದೇಣಿಗೆ, ಬಂಗಾರ, ಬೆಳ್ಳಿ ಭಕ್ತರಿಂದ ಸಂಗ್ರಹವಾಗುತ್ತದೆ. ಕರ್ನಾಟಕವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗಾಗಿ ದೇವಸ್ಥಾನದ ಸುತ್ತಲೂ ಭಕ್ತರಿಗಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ದೇವಸ್ಥಾನದ ಎದುರುನೆಲಮಟ್ಟ ಸೇರಿ 8 ಅಂತಸ್ತಿನ ವಸತಿ ಸಮುಚ್ಛಯ ನಿರ್ಮಾಣ ಹಂತದಲ್ಲಿದೆ. ಈ ಮೊದಲು ಈ ಕಟ್ಟಡ ನಿರ್ಮಾಣಕ್ಕೆ₹ 5.53 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಒಂದೇ ಸೂರಿನಡಿ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿಯಾಗಿ ₹ 4.30 ಕೋಟಿ ನೀಡುವಂತೆ ಆಡಳಿತ ಮಂಡಳಿ ಪ್ರಸ್ತಾವ ಕಳಿಸಿದೆ. ಅದೂ ಸಹ ಬಿಡುಗಡೆಯಾಗಲಿದೆ ಎನ್ನುತ್ತಿವೆ ದೇವಸ್ಥಾನದ ಮೂಲಗಳು.

ADVERTISEMENT

ಇಲ್ಲಿ ಒಟ್ಟು 32ಕೋಣೆಗಳು ಇರಲಿದ್ದು, ಈಗಾಗಲೇ ಒಂದು ಫಂಕ್ಷನ್ ಹಾಲ್, ಅಡುಗೆ ಮನೆ ಸೇರಿ 16 ಕೋಣೆಗಳು ನಿರ್ಮಾಣವಾಗಿವೆ. ಸಿಸಿ ಕ್ಯಾಮೆರಾ, ನೋಂದಣಿ ಕಚೇರಿ, ನೀರಿನ ಸೌಲಭ್ಯ ಸೇರಿ ಹಲವು ವ್ಯವಸ್ಥೆಯನ್ನು ಒಂದೇ ಕಡೆಗೆ ದೊರಕುವಂತೆ ಮಾಡಲಾಗಿದೆ. ಆ ಮೂಲಕ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದೇ ಸೌಲಭ್ಯ ಕಲ್ಪಿಸಲು ದೇವಸ್ಥಾನದಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಯೋಜನೆ ರೂಪಿಸಿದ್ದಾರೆ.

ಮೂಢನಂಬಿಕೆ ತಡೆಗೆ ಕ್ರಮ ಕೈಗೊಳ್ಳಲಿ: ಹುಲಿಗಿ ಕ್ಷೇತ್ರದಲ್ಲಿ ದೇವಿಯ ಹೆಸರಿನಲ್ಲಿ ಕೋಳಿ, ಕುರಿ ಬಲಿ ಕೊಡಲಾಗುತ್ತದೆ. ವರ್ಷದ ಉದ್ದಕ್ಕೂ ಹರಕೆಯ ಹೆಸರಿನಲ್ಲಿ ಪ್ರಾಣಿಗಳನ್ನು ವಧೆ ಮಾಡಿ, ದೇವಸ್ಥಾನದ ಆವರಣದಲ್ಲಿಯೇ ಬೇಯಿಸಿ ನೈವೇದ್ಯ ಅರ್ಪಿಸಿ ಊಟ ಮಾಡಲಾಗುತ್ತದೆ. ಇದರಿಂದ ಎಲ್ಲಿ ಬೇಕೆಂದರಲ್ಲಿ ತ್ಯಾಜ್ಯವನ್ನು ಹರಡಲಾಗುತ್ತಿದ್ದು, ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಭಕ್ತರ ಆರೋಪ.

ಈ ತ್ಯಾಜ್ಯಗಳಿಂದ ಕ್ಷೇತ್ರದ ತುಂಬ ಸೊಳ್ಳೆ, ನೊಣಗಳ ಹಾವಳಿ ವಿಪರೀತವಾಗಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ಇದೆ. ದೇವರ ಹೆಸರಿನಲ್ಲಿ ಮುತ್ತು ಕಟ್ಟುವುದು, ಜಡೆ ಬಿಡುವುದು, ದೇವದಾಸಿ ಪದ್ಧತಿ ನಡೆಯುವ ಕ್ರಿಯೆಗಳ ಮೇಲೆ ಹದ್ದಿನ ಕಣ್ಣಿಡಬೇಕಾಗಿದೆ. ಜಾತ್ರೆಯ ಸಂದರ್ಭದಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ಭಕ್ತರು.

'ಬರುವ ಭಕ್ತರಿಗೆ ಪವಿತ್ರ ಸ್ನಾನಕ್ಕೆ ನೀರಿನ ಕೊರತೆ ಆಗಲಿದ್ದು, ತುಂಗಭದ್ರಾ ನದಿಯಿಂದ ನೀರು ಬಿಡುಗಡೆ ಮಾಡಲು ಜಲಾಶಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು' ಎಂದು ಗ್ರಾಮದ ಫಕೀರಪ್ಪ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.