ಹನುಮಸಾಗರ: ವಿದ್ಯಾರ್ಥಿಗಳು ಮನರಂಜನೆ ಜೊತೆಗೆ ಕಲಿಕೆಯನ್ನು ದೃಢೀಕರಣ ಮಾಡಿಕೊಳ್ಳುವುದಕ್ಕಾಗಿ ಸಂದರ್ಶನ ಮಾದರಿ, ನಾಟಕ, ಚರ್ಚಾಕೂಟ, ಕಲಿಕೆಗೆ ಜನಪದಕೊಂಡಿ ಇಂತಹ ವಿವಿಧ ಕಾರ್ಯಕ್ರಮಗಳನ್ನು ಸಮಾಜವಿಜ್ಞಾನ ಸಂಘದ ಅಡಿಯಲ್ಲಿ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಶಿಕ್ಷಕ ಹುಸೇನಸಾಬ ಇಲಕಲ್ಲ ಹೇಳಿದರು.
ಶನಿವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನ ಸಂಘದಿಂದ
ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ಸಂದರ್ಶನ ಮಾದರಿಯ ‘ಡಿಜಿಟಲ್ ಸಂದರ್ಶನ ಕಲಿಕಾ ಕಾರ್ಯಕ್ರಮ’ದಲ್ಲಿ ಮಾಹಿತಿ ನೀಡಿದರು.
ಹತ್ತನೇ ವರ್ಗದ ಸಮಾಜ ವಿಜ್ಞಾನದಲ್ಲಿ ಬರುವ ಪ್ರತಿ ಯೊಂದು ಪಾಠಗಳನ್ನು ಶಿಕ್ಷಕ ಕಿಶನರಾವ್ ಕುಲಕರ್ಣಿ ಡಿಜಿಟಲೀಕರಣ ಗೊಳಿಸುವುದರ ಜೊತೆಗೆ ಪ್ರತಿಯೊಂದು ಪಾಠಗಳಲ್ಲಿ ಬರುವ ವಿಷಯವನ್ನು ಸಂಭಾಷಣೆ, ಪ್ರಶ್ನೋತ್ತರ, ಥಟ್ ಅಂತ ಹೇಳಿ, ಹಾಡಿನ ಮೂಲಕ ಹೀಗೆ ವಿವಿಧ ಮಾದರಿಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಂದಲೇ ಪ್ರದರ್ಶನ ನೀಡುವುದರಿಂದ ಕಲಿಕೆಗೆ ಇದು ಸರಳ ಮಾರ್ಗವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಹಾಗೂ ಕ್ಷೇತ್ರಶಿಕ್ಷಣಾಧಿಖಾರಿ ಚನ್ನಬಸಪ್ಪ ಎಂ ಮಾಹಿತಿ ನೀಡಿ, ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಮಕ್ಕಳಿಗೆ ಮಾಹಿತಿ ನೀಡುವುದು ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಹೈಟೆಕ್ ಮಾದರಿಯ ವ್ಯವಸ್ಥೆ ಮಾಡಿರುವುದು ಅಭಿಮಾನ ತಂದಿದೆ ಎಂದರು.
ಪ್ರತಿ ಅಧ್ಯಾಯಗಳು ಮುಗಿದ ನಂತರ ಡಿಜಿಟಲ್ಯುಕ್ತ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ಮನೆಯಲ್ಲಿಯೇ ಬಿಡಿಸುತ್ತಿದ್ದು, ಅದರಲ್ಲಿ ಏನಾದರೂ ಸಂದೇಹಗಳು ಎದುರಾದರೆ ಅದೇ ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅಲ್ಲಿ ಶಿಕ್ಷಕರು ಮಾಡಿದ ಪಾಠದ ಮುಖ್ಯಾಂಶಗಳ ಪಾಠ ಮೊಬೈಲ್ನಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಕ್ಕೆ ಯಾವುದೇ ಖರ್ಚು ಇಲ್ಲ. ಸಮಯ ಹಾಗೂ ತಂತ್ರಜ್ಞಾನದ ಮಾಹಿತಿ ಬೇಕು ಅಷ್ಟೆ ಎಂದು ಶಿಕ್ಷಕರು ಹೇಳಿದರು.
ಎಸ್ಡಿಎಂಸಿ ಉಪಾಧ್ಯಕ್ಷ ಶಿವಪ್ಪ ಕಂಪ್ಲಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.