ಗಂಗಾವತಿ: ಹಿಂದೆ ಬಿಜೆಪಿಯ ಪರಣ್ಣ ಮುನವಳ್ಳಿ ಅವರನ್ನು ಗೆಲ್ಲಿಸುವುದಕ್ಕೆ ಇಕ್ಬಾಲ ಅನ್ಸಾರಿ ಅವರನ್ನು ಫುಟ್ಬಾಲ್ ಆಡ್ತಿನಿ ಎಂದು ಹೇಳಿದ್ದೆ. ಆದರೆ ಈಗ ನನ್ನ ಗೆಲುವಿಗಾಗಿ ಇಬ್ಬರನ್ನು ಸೇರಿಸಿ ಪುಟ್ಬಾಲ್ ಆಡಲು ಬಂದಿದ್ದೇನೆ ಎಂದು ಕೆಆರ್ಪಿಪಿ ಸಂಸ್ಥಾಪಕ ಗಾಲಿ ಜನಾದರ್ನರೆಡ್ಡಿ ಹೇಳಿದರು.
ತಾಲ್ಲೂಕಿನ ಸಾಣಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಜನಾರ್ದನರೆಡ್ಡಿ ನಡೆ, ಗ್ರಾಮೀಣಾಭಿವೃದ್ಧಿ ಕಡೆ ಪ್ರಚಾರ ಕಾರ್ಯಕ್ರಮದಲ್ಲಿ ಅನ್ಸಾರಿ ವಿರುದ್ಧ ಹರಿಹಾಯ್ದರು.
ಬಿಜೆಪಿಗಾಗಿ ನನ್ನ 25ನೇ ವಯಸ್ಸಿನಿಂದಲೇ ದುಡಿಯುತ್ತ ಬಂದಿದ್ದು, 1998ರ ಆಸುಪಾಸುನಲ್ಲಿ ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರೆ, ಅವರ ವಿರುದ್ಧವಾಗಿ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಆಗ 18 ದಿನಗಳಲ್ಲಿ 40 ಕಾರ್ಯಕ್ರಮ, ಸಮಾವೇಶ ನಡೆಸಿದ ಹೆಗ್ಗಳಿಕೆ ನನ್ನದಿದೆ ಎಂದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಹೆಸರಿಗೆ ಕೆಲಸ ಮಾಡಿನಿ ಅಂತ ಹಾಲಿ, ಮಾಜಿ ನಾಯಕರು ಜಂಬ ಕೊಚ್ಚಿಕೊಳ್ತಾರೆ. ನನ್ನ ಗೆಲ್ಲಿಸಿ, ಸಾಣಾಪುರ ಭಾಗದ ಪ್ರವಾಸೋದ್ಯಮ ಬೆಳೆಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ರಾಜಕೀಯಕ್ಕಾಗಿ ಬಂದಿಲ್ಲ. ಜನಸೇವೆಗೆ ಬಂದಿದ್ದೇನೆ. ಬಿಜೆಪಿಗರೇ ನನಗೆ ಮೋಸ ಮಾಡಿ ಜೈಲಿಗೆ ಅಟ್ಟಿದ್ದಾರೆ. ಬಿಜೆಪಿಗರು ಅಕ್ರಮ ಗಣಿಗಾರಿಕೆ ಆರೋಪದಡಿ ಬಲೆಗೆ ಸಿಲುಕಿಸಿ ಜೈಲಿಗಟ್ಟಿದ್ದಾರೆ ಎಂದು ಆರೋಪಿಸಿದರು.
ನಾನು ಯಾವುದಕ್ಕೂ ಎದೆಗೂಂದಿಲ್ಲ. ಜನರ ಆರ್ಶಿವಾದ ಒಂದಿದ್ದರೆ, ಮೋಸ ಮಾಡಿದವರಿಗೆ ಏನೆಂಬುದು ತೋರಿ ಸಿಕೊಡುತ್ತೇನೆ. ಶಾಸಕನಾದರೆ ಸಾಣಾಪುರ ಗ್ರಾಮದ ಚರ್ಚ್, ಮಸೀದಿ, ದೇವಸ್ಥಾನ, ಶಾಲಾ ಮೈದಾನ ಅಭಿವೃದ್ದಿ ರಸ್ತೆ ಅಗಲಿಕರಣದಲ್ಲಿ ಸೂರು ಕಳೆದುಕೊಳ್ಳುವವರಿಗೆ ಒಳಿತು ಮಾಡುತ್ತೇನೆ ಎಂದರು.
ನಂತರ ಗ್ರಾಮದ ಯುವಕರು, ಮಹಿಳೆಯರು ಪಕ್ಷ ಸೇರ್ಪಡೆಯಾದರೂ, ಕೆಆರ್ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ನಾಗರಾಜ ಚಳಗೇರಿ, ಯಮನೂರ ಚೌಡ್ಕಿ, ಗ್ರಾಮಸ್ಥರಾದ ನರೇಶ, ಮಂಜುನಾಥ ರೆಡ್ಡಿ, ಮಲ್ಲಿಕಾ ರ್ಜುನ, ರಂಗನಾಥ, ಅದಾಮು, ಹುಲಿಗೇಶ, ಶ್ರೀಸಾಯಿ ಸೇರಿದಂತೆ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.