
ಕಾರಟಗಿ: ಇಲ್ಲಿಯ ರಾಜ್ಯ ಹೆದ್ದಾರಿ ಬಳಿಯ ನ್ಯಾಷನಲ್ ಗ್ರೀನ್ವ್ಯಾಲಿ ರೂರಲ್ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಗಾಗಿ ರಸ್ತೆಹುಬ್ಬು ಹಾಕಿ, ವಾಹನಗಳ ವೇಗದ ನಿಯಂತ್ರಣ ವ್ಯವಸ್ಥೆ ಮಾಡಬೇಕು ಎಂದು ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪುರಸಭೆಯ ಎಂಜಿನೀಯರ್ ಮಂಜುನಾಥ ಹಾಗೂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಮರಳಿ ಬಳಿಯ ಟೋಲ್ಗೇಟ್ನ ವ್ಯವಸ್ಥಾಪಕರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ಶಾಲೆಗೆ ಹೋಗಲು, ಶಾಲೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆಯ ಹುಬ್ಬು ಇರದೇ, ಹೊರ ವಲಯವಾಗಿದ್ದರಿಂದ ವಾನಗಳು ಭಾರಿ ವೇಗದಲ್ಲಿ ಸಂಚರಿಸುತ್ತಿರುವುದರಿಂದ ಮಕ್ಕಳ ಸುರಕ್ಷತೆಯೇ ಇಲ್ಲದಾಗಿದೆ. ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಪಾಲಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಶೀಘ್ರವೇ ಸುರಕ್ಷತೆಯ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪೋಷಕರು ಪ್ರತಿಕ್ರಿಯಿಸಿ, ಆರ್. ಜಿ. ರಸ್ತೆಯಲ್ಲಿಯ ನ್ಯಾಷನಲ್ ಸ್ಕೂಲ್ನ ಮುಂಭಾಗದಲ್ಲಿ ನೂರಾರು ವಾಹನಗಳು ನಿರಂತರವಾಗಿ ಸಂಚರಿಸುತ್ತವೆ. ಬೆಳಗಿನ ಶಾಲೆ ಆರಂಭದ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ವಾಹನಗಳ ಸಂಚಾರ ದಟ್ಟಣೆ ಮಿತಿ ಮೀರಿರುತ್ತದೆ. ಮಕ್ಕಳ ಬಗ್ಗೆ ನಮಗಂತೂ ತುಂಬಾ ಆತಂಕವಿದೆ. ಅವಘಡಗಳು ಸಂಭವಿಸಿದಾಗ ಈ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ. ಸಂಚಾರ ನಿಯಂತ್ರಣ, ವೇಗದ ಮಿತಿ ಹಾಕುವುದರ ಜೊತೆಗೆ ರಸ್ತೆಹುಬ್ಬುಗಳನ್ನು ತ್ವರಿತವಾಗಿ ಹಾಕಿ ಮಕ್ಕಳ ಸುರಕ್ಷತೆಗೆ ಅಧಿಕಾರಿಗಳು ಮುಂದಾಗಬೇಕು ಎಂದರು.
ನ್ಯಾಷನಲ್ ಸ್ಕೂಲ್ನ ಆಡಳಿತ ಮಂಡಳಿ ಮುಖ್ಯಸ್ಥರು, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.