
ಕೊಪ್ಪಳ: ಬಾಕಿ ಕೊಡಬೇಕಿದ್ದ ಹಣ ಪಡೆದುಕೊಳ್ಳಲು ಹೊಸಪೇಟೆಯಿಂದ ಬಂದಿದ್ದ ಮಹಿಳೆ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ ಎಫ್ಐಆರ್ ದಾಖಲಾಗಿದೆ.
ಮಹಿಳೆಗೆ ಆರು ತಿಂಗಳ ಹಿಂದೆ ಪರಿಚಿತನಾಗಿದ್ದ ಗದಗ ಜಿಲ್ಲೆಯ ಲಕ್ಷ್ಮಣ ಕೆಂಚಪ್ಪ ಕರಗುಳಿ ಎಂಬಾತ ₹5,000 ಸಾಲ ಹಿಂತಿರುಗಿಸಬೇಕಿತ್ತು. ಈ ಹಣ ಪಡೆದುಕೊಳ್ಳಲು ಮಹಿಳೆ ಪೋನ್ ಮಾಡಿದಾಗ ಲಕ್ಷ್ಮಣ ಕುಷ್ಟಗಿಗೆ ಬರುವಂತೆ ಹೇಳಿದ್ದು, ಅಲ್ಲಿಗೆ ಬಂದ ಮಹಿಳೆಯನ್ನು ಬೈಕ್ ಮೇಲೆ ಕುಷ್ಟಗಿ ಹಾಗೂ ಯಲಬುರ್ಗಾದ ರಸ್ತೆಯ ಮದ್ಲೂರ ಸಮೀಪದಲ್ಲಿರುವ ಹೊಲದ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆಗ ಆತನ ಮೂವರು ಸ್ನೇಹಿತರೂ ಜೊತೆಯಲ್ಲಿಯೇ ಬಂದಿದ್ದು, ಒಟ್ಟು ನಾಲ್ಕೂ ಜನ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಬಳಿಕ ಮಹಿಳೆಯೇ ನಿತ್ರಾಣಗೊಂಡು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದಾಗ ಪೊಲೀಸರು ನೆರವಿಗೆ ಬಂದಿದ್ದು ತಡರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹೋಂಗಾರ್ಡ್ ಆಯ್ಕೆಗೆ ಮಹಿಳೆ ತಯಾರಿ ನಡೆಸುತ್ತಿದ್ದಳು. ಕೃತ್ಯ ಎಸಗುವ ಮೊದಲು ನಾಲ್ಕೂ ಜನ ಮಹಿಳೆಗೆ ಜ್ಯೂಸ್ ಎಂದು ನಂಬಿಸಿ ಮದ್ಯ ಕುಡಿಸಿದ್ದಾರೆ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅಪಘಾತವಾಗಿದೆ ಎಂದು ಪತ್ನಿ ಹೇಳಿದ್ದರಿಂದ ಬಂದಿದ್ದೇನೆ. ಪೊಲೀಸ್ ವಿಚಾರಣೆಯಿಂದ ಬಾಕಿ ವಿಷಯ ಗೊತ್ತಾಗಬೇಕಿದೆ’ ಆಕೆಯ ಪತಿ ಮಾಧ್ಯಮಗಳಿಗೆ ತಿಳಿಸಿದರು.
ನಾಲ್ವರ ಬಂಧನ:
ಭಾನುವಾರ ಮಧ್ಯರಾತ್ರಿಯೇ ಮೂರು ಪೊಲೀಸ್ ತಂಡಗಳನ್ನು ರಚಿಸಿ ಗದಗ ಜಿಲ್ಲೆಯ ಲಕ್ಷ್ಮಣ ಕೆಂಚಪ್ಪ ಕರಗುಳಿ, ಜಗಳೂರಿನ ಬಸವರಾಜ ಸಕ್ರಪ್ಪ ಸಿಪ್ರಿ, ಯಲಬುರ್ಗಾ ತಾಲ್ಲೂಕಿನ ಹನಮಾಪುರ ಗ್ರಾಮದ ಶಶಿಕುಮಾರ ಮಹಾದೇವಪ್ಪ ಮಸ್ಕಿ ಹಾಗೂ ಅದೇ ಗ್ರಾಮದ ಭೀಮಪ್ಪ ಮಹಾದೇವಪ್ಪ ಮಸ್ಕಿ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹಿಳೆ ಹೋಂ ಗಾರ್ಡ್ ಆಗಿರಲಿಲ್ಲ. ಅದಕ್ಕೆ ಆಯ್ಕೆಯಾಗಲು ತಯಾರಿ ನಡೆಸುತ್ತಿದ್ದಳು. ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.ಡಾ. ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.