ಕೊಪ್ಪಳದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 11ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು
ಕೊಪ್ಪಳ: ‘ಕನ್ನಡ ಭಾಷೆ, ನೆಲ, ಸಂಸ್ಕೃತಿ ಉಳಿವಿಗಾಗಿ ಇಂದಿನ ಯುವಜನತೆ ತಮ್ಮನ್ನು ಹೆಚ್ಚಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ನಿಂದ ಆಯೋಜಿಸಲಾಗಿದ್ದ 11ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಕೋಪಣಾಚಲವೆಂಬ ಪ್ರಾಚೀನ ಹೆಸರಿನ ಕೊಪ್ಪಳ ಕಲೆ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ದಾಸೋಹಕ್ಕೆ ಹೆಸರುವಾಸಿ. ಸಾಹಿತ್ಯ ಲೋಕಕ್ಕೆ ಅಗಾಧ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಸಾಕಷ್ಟು ಸಾಹಿತ್ಯಿಕ ಶ್ರೀಮಂತಿಕೆ ಹೊಂದಿರುವ ಜಿಲ್ಲೆಯ ಕಾರ್ಯಕ್ರಮದಲ್ಲಿ ಜನರು ನೀರಸನ ತೋರಿಸುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇತ್ತೀಚೆಗೆ ಕನ್ನಡ ಭಾಷೆ ಸೊರಗುತ್ತಿದೆ ಎಂದೆನಿಸುತ್ತಿದೆ. ಬೆಂಗಳೂರಿನ ಕೆಲ ಭಾಗಗಳಲ್ಲಿ
ಹತ್ತರಲ್ಲಿ ಎಂಟು ಜನ ತಮಿಳು ಭಾಷಿಕರೇ ಸಿಗುತ್ತಾರೆ. ಕನ್ನಡಕ್ಕಾಗಿ ನಾವೆಲ್ಲ ಎಷ್ಟೆಲ್ಲ ಹೋರಾಟ ಮಾಡ್ತೀವಿ, ಶ್ರಮ ಪಡ್ತೀವಿ, ಆದರೂ ಇಷ್ಟು ಉದಾಸೀನ ನಮ್ಮಲ್ಲಿ ಕಂಡುಬರುತ್ತಿದೆ. ಜನರಲ್ಲಿ ಭಾಷಾಭಿಮಾನದ ಅವಶ್ಯಕತೆ ಇದೆ. ಸಾಹಿತ್ಯ, ವಿಡಂಬನೆಯೊಂದಿಗೆ ಅಗಾಧ ಅರ್ಥ ಕಲ್ಪಿಸುವ ಚುಟುಕುಗಳ ಇಂತಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ’ ಎಂದು ಆಶಿಸಿದರು.
ಉಪನ್ಯಾಸ ನೀಡಿದ ಸಾಹಿತಿ ಬಸವರಾಜ್ ಉಪ್ಪಿನ್ ಮಾತನಾಡಿ, ‘ಚುಟುಕು ಸಾಹಿತ್ಯಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ. ಚಿಕ್ಕ ಚಿಕ್ಕ ಪದಗಳನ್ನು ಹೊಂದಿದ್ದರೂ ಕೂಡ ಗಂಭೀರ ಅರ್ಥ ಕೊಡುವ ಪ್ರಕ್ರಿಯೆ ಈ ಚುಟುಕು ಸಾಹಿತ್ಯವಾಗಿದೆ. ಇದನ್ನು ಓದಲು ಬಳಸಲು ಬಹಳ ಸುಲಭ. ಏಳನೇ ಶತಮಾನದ ವಚನಗಳು, ತ್ರಿಪದಿಗಳು ಕೂಡ ಚುಟುಕಿನಲ್ಲಿಯೇ ಬರುತ್ತವೆ. ಇವುಗಳೇ ಚುಟುಕುಗಳಿಗೆ ನಾಂದಿ. ಜಗತ್ತಿನ ಬಹುತೇಕ ಭಾಷೆಗಳಿಗೆ ಕನ್ನಡ ಸಾಹಿತ್ಯದ ಕೊಡುಗೆ ಚುಟುಕಿನ ರೂಪದ ವಚನಗಳಾಗಿವೆ’ ಎಂದರು.
ಮಠದ ಶರಣಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್ತಿನ ರಾಜ್ಯ ಸಂಚಾಲಕ ಎಂ.ಜಿ.ಆರ್ ಅರಸ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ವೀರಣ್ಣ ನಿಂಗೋಜಿ, ಅಕ್ಬರ್.ಸಿ,
ಕಾಲಿಮಿರ್ಚಿ, ಮಹಾಂತೇಶ ಮಲ್ಲನಗೌಡರ್, ವೀರಬಸಪ್ಪ ಪಟ್ಟಣಶೆಟ್ಟಿ, ಎಂ.ವಿ. ಅಳವಂಡಿ, ಎಸ್.ಎಂ ಕಂಬಾಳಿಮಠ, ಮಾಲಪ್ಪಗೌಡರ್, ಸಾವಿತ್ರಿ ಮುಜುಮದಾರ್, ಮಹೇಶ ಬಳ್ಳಾರಿ, ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳದನ ಸರ್ವಾಧ್ಯಕ್ಷ ಹಿರಿಯ ಸಾಹಿತಿ ವೀರಣ್ಣ ವಾಲಿ ಅವರ ನೇತೃತ್ವದಲ್ಲಿ ಕನಕದಾಸ ವೃತ್ತದಿಂದ ಸಾಹಿತ್ಯ ಭವನದವರೆಗೆ ಜಾಥಾ ನಡೆಯಿತು. ಕನ್ನಡ ನಾಡು ನುಡಿಯ ಘೋಷಣೆಗಳನ್ನು ಕೂಗುತ್ತ ಜಾಥಾ ಸಾಗಿ ಬಂತು.
ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ಕನ್ನಡದಿಂದ ಬದುಕು ಕಟ್ಟಿಕೊಳ್ಳುವ ಕೆಲಸವಾಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ವೀರಣ್ಣ ವಾಲಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ 11ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಾಲ್ಲೂಕಿಗೊಂದು ಸಾಹಿತ್ಯ ಭವನ ನಿರ್ಮಾಣವಾಗಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗುವ ಡಾ.ಮಹಿಷಿ ವರದಿ ಜಾರಿಯಾಗಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.