ಕೊಪ್ಪಳ: ‘ಕೊಪ್ಪಳವು ಪ್ರಾಚೀನ ಕಾಲದಲ್ಲಿ ಪ್ರಮುಖ ತಾಣವಾಗಿದ್ದು ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಲ್ಲಿ ಅನೇಕ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು’ ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ ಹೇಳಿದರು.
ಗವಿಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಮೇಘನ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಅವರ ‘ಕೊಪ್ಪಳ ಸ್ಥಳನಾಮ: ಒಂದು ವಿಶ್ಲೇಷಣೆ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಕೊಪ್ಪಳ ಸ್ಥಳನಾಮ ಪ್ರಾಚೀನ ಕಾಲದಿಂದಲೂ ಬದಲಾಗುತ್ತ ಅದರ ವೈಶಿಷ್ಟ್ಯ ಮೆರೆಯುತ್ತಾ ಅಂದಿನ ಕಾಲದ ಚರಿತ್ರೆ, ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆ ತಿಳಿಸುತ್ತಾ ಬಂದಿರುವುದು ಕೊಪ್ಪಳದ ವಿಶೇಷತೆ’ ಎಂದರು.
ಭದ್ರತಾ ಕಾವಲುಗಾರ ಗವಿಸಿದ್ಧಪ್ಪ ಕಡೆಮನಿ ಕೃತಿ ಲೋಕಾರ್ಪಣೆ ಮಾಡಿ ’ಇಂತಹ ಕೃತಿ ಬಿಡುಗಡೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ’ ಎಂದು ನುಡಿದರು.
ಪ್ರಾಧ್ಯಾಪಕ ಡಾ.ರಾಜು ಹೊಸಮನಿ ಕೃತಿ ಕುರಿತು ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವಿರೇಶಕುಮಾರ ಎನ್.ಎಸ್, ಪ್ರಾಧ್ಯಾಪಕರಾದ ಡಾ.ದಯಾನಂದ ಸಾಳುಂಕೆ, ಪ್ರೊ.ಶರಣಬಸಪ್ಪ ಬಿಳೆಎಲಿ, ಡಾ.ಬಾಳಪ್ಪ ತಳವಾರ ಮಾತನಾಡಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚನ್ನಬಸವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.