ADVERTISEMENT

ಕುಷ್ಟಗಿ | ಗರಿಗೆದರಿದ ಮುಂಗಾರು: ಬೀಜ, ಗೊಬ್ಬರ ಕೃಷಿ ಪರಿಕರ ಖರೀದಿಗೆ ರೈತರ ಧಾವಂತ

ನಾರಾಯಣರಾವ ಕುಲಕರ್ಣಿ
Published 29 ಮೇ 2025, 5:47 IST
Last Updated 29 ಮೇ 2025, 5:47 IST
ಕುಷ್ಟಗಿ ರೈತ ಸಂಪರ್ಕ ಕೇಂದ್ರದಿಂದ ರೈತರು ಬಿತ್ತನೆ ಬೀಜ ಖರೀದಿಸಿದ್ದು ಕಂಡುಬಂದಿತು
ಕುಷ್ಟಗಿ ರೈತ ಸಂಪರ್ಕ ಕೇಂದ್ರದಿಂದ ರೈತರು ಬಿತ್ತನೆ ಬೀಜ ಖರೀದಿಸಿದ್ದು ಕಂಡುಬಂದಿತು   

ಕುಷ್ಟಗಿ: ರೋಹಿಣಿ ನಕ್ಷತ್ರದಲ್ಲಿ ಮಳೆ ಹದವರಿತು ಸುರಿದಿದ್ದು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕಳೆದ ಎರಡು ವಾರದಿಂದಲೂ ನಿತ್ಯವೂ ಮಳೆರಾಯನ ಆಗಮನ ಭೂಮಿಯನ್ನು ಹಸಿಯಾಗಿಸಿದೆ. ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದು ರೈತರು ಹೊಲಗದ್ದೆಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಹೊಲಗಳು ಸ್ವಚ್ಛವಾಗಿ ಬಿತ್ತನೆಗೆ ಸಜ್ಜಾಗಿ ನಿಂತಿವೆ.

ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂಗಾರಿನಲ್ಲಿ ತೇವಾಂಶ ಸಾಕಷ್ಟಿರುವುದರಿಂದ ಬಿತ್ತನೆಗೆ ಅತ್ಯಂತ ಪ್ರಶಸ್ತವಾಗಿದೆ. ಮಳೆ ಹಿಂದೆ ಸರಿಯುತ್ತಿದ್ದಂತೆ ರೈತರು ಕೂರಿಗೆಗಳನ್ನು ಸಜ್ಜುಗೊಳಿಸಿಟ್ಟುಕೊಂಡು ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಇತರೆ ಪರಿಕರಗಳ ಖರೀದಿಗೆ ಮುಂದಾಗಿರುವುದು ಕಂಡುಬರುತ್ತಿದೆ.

ADVERTISEMENT

ಬಿತ್ತನೆ ಪ್ರಕ್ರಿಯೆಗೆ ಕೃಷಿ ಇಲಾಖೆಯೂ ರೈತರಿಗೆ ನೆರವಾಗಲು ಸಜ್ಜಾಗಿ ನಿಂತಿದೆ. ಈಗಾಗಲೇ ಸುಧಾರಿತ ತಳಿಗಳ ಬಿತ್ತನೆಬೀಜಗಳ ಮಾರಾಟಕ್ಕೆ ಕ್ರಮ ಕೈಗೊಂಡಿದೆ. ಕುಷ್ಟಗಿ, ಹನುಮಸಾಗರ, ಹನುಮನಾಳ, ತಾವರಗೇರಾ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಹೆಚ್ಚುವರಿಯಾಗಿ ಚಳಗೇರಾ, ದೋಟಿಹಾಳ ಮತ್ತು ಯರಗೇರಾ ಗ್ರಾಮಗಳಲ್ಲಿನ ಉಪ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಮಾರಾಟ ಆರಂಭಗೊಂಡಿದೆ.

ಈ ಬಾರಿ ಸುಮಾರು 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗುವ ಬಗ್ಗೆ ಕೃಷಿ ಇಲಾಖೆ ಅಂದಾಜಿಸಿದೆ. ಹಿಂದೆ ಎರೆ ಜಮೀನಿನಲ್ಲಿ ಅಲ್ಪಾವಧಿ ತಳಿ ಹೆಸರು ಬಿತ್ತನೆ ನಡೆಸುತ್ತಿದ್ದ ರೈತರು ಕಳೆದ ವರ್ಷದಿಂದ ಪರ್ಯಾಯವಾಗಿ ತೊಗರಿ ಬಿತ್ತನೆಯಲ್ಲಿ ಆಸಕ್ತಿ ವಹಿಸಿದ್ದು ಕಂಡುಬಂದಿದೆ. ಏಕ ಬೆಳೆಯಾಗಿ ತೊಗರಿ ಬೆಳೆದಿದ್ದರಿಂದ ಹಿಂದಿನ ವರ್ಷ ಒಂದಷ್ಟು ಆದಾಯವೂ ರೈತರ ಕಿಸೆ ಸೇರಿತ್ತು. ಹಾಗಾಗಿ ಈ ಬಾರಿಯೂ ತೊಗರಿ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ಮೆಕ್ಕೆಜೋಳಕ್ಕೆ ರೈತರು ಎರಡನೇ ಮುಖ್ಯಬೆಳೆಯಾಗಿ ಆದ್ಯತೆ ನೀಡಿದ್ದಾರೆ. ಉಳಿದಂತೆ ಸಜ್ಜೆ, ಎಳ್ಳು ಇತರೆ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.

ಹೆಸರು ಬಿತ್ತನೆಗೆ ರೋಹಿಣಿ ಮಳೆ ಅನುಕೂಲ ಒದಗಿಸಿಕೊಟ್ಟಿದ್ದು ರೈತರು ಮೊದಲು ಹೆಸರು ಬಿತ್ತನೆಗೆ ಮುಂದಾಗಬೇಕು, ಮೆಕ್ಕೆಜೋಳ ಇತರೆ ಬೆಳೆಗಳ ಬಿತ್ತನೆಗೆ ಇನ್ನೂ ಬಹಳಷ್ಟು ಸಮಯವಿದೆ. ಸೂಕ್ತಪ್ರಮಾಣದಲ್ಲಿ ರಸಗೊಬ್ಬರ ಮತ್ತು ಬೀಜಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ನಡೆಸಬೇಕು. ನಂತರ ಎರಡನೇ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ.

ಬೀಜ ವಿತರಣೆ ನಿಯಮಾನುಸಾರ ನಡೆಯುತ್ತಿಲ್ಲ. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಮುಖನೋಡಿ ಮಣೆಹಾಕುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಲಿ
ಹನುಮಗೌಡ ಪಾಟೀಲ ನೆರೆಬೆಂಚಿ ರೈತ
ಬೀಜ ಒಯ್ಯದ ರೈತರ ಹೆಸರಿನಲ್ಲಿ ಎಫ್‌ಐಡಿ ಬಳಸಿ ಇತರೆ ರೈತರು ಬೀಜ ಖರೀದಿಸಿರಬಹುದು. ತಾರತಮ್ಯ ಇಲ್ಲ. ಆದರೂ ಈ ಬಗ್ಗೆ ಪರಿಶೀಲಿಸುತ್ತೇವೆ.
ನಾಗರಾಜ ಕಾತರಕಿ ಕೃಷಿ ಸಹಾಯಕ ನಿರ್ದೇಶಕ

ಬೀಜ ವಿತರಣೆಯಲ್ಲಿ ತಾರತಮ್ಯ: ಆರೋಪ

‘ಎಫ್‌ಐಡಿಯಲ್ಲಿ ಆಧಾರ್ ಜೋಡಣೆಯಾಗಿರುವ ಪ್ರತಿ ರೈತರಿಗೆ ಗರಿಷ್ಟ ಐದು ಎಕರೆಗೆ ಸಾಕಾಗುವಷ್ಟು ಬಿತ್ತನೆ ಬೀಜ ವಿತರಿಸುವುದು ಕೃಷಿ ಇಲಾಖೆ ನಿಯಮ. ಆದರೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ತಾರತಮ್ಯ ನೀತಿ ಅನುರಿಸುತ್ತಿದ್ದಾರೆ. ತಮಗೆ ಬೇಕಾದವರಿಗೆ ಹತ್ತು ಎಕರೆಗೆ ಸಾಕಾಗುವಷ್ಟು ಬೀಜ ಕೊಡುತ್ತಿದ್ದಾರೆ’ ಎಂದು ಕುಷ್ಟಗಿ ರೈತ ಸಂಪರ್ಕ ಕೇಂದ್ರದ ಬಳಿ ರೈತರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.