ADVERTISEMENT

ಕುಷ್ಟಗಿ– ವೈಜ್ಞಾನಿಕ ಚಿಂತನೆ,ವೈಚಾರಿಕ ಪ್ರಜ್ಞೆ ಬೇಕು: ಸಿದ್ಧರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:10 IST
Last Updated 2 ಫೆಬ್ರುವರಿ 2026, 4:10 IST
ಕುಷ್ಟಗಿ ತಾಲ್ಲೂಲಿನ ಮಾದಾಪುರದ ಸಿದ್ಧರಾಮೇಶ್ವರ ನಾಮಫಲಕಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪುಷ್ಪಮಾಲೆ ಸಮರ್ಪಿಸಿದರು
ಕುಷ್ಟಗಿ ತಾಲ್ಲೂಲಿನ ಮಾದಾಪುರದ ಸಿದ್ಧರಾಮೇಶ್ವರ ನಾಮಫಲಕಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪುಷ್ಪಮಾಲೆ ಸಮರ್ಪಿಸಿದರು   

ಕುಷ್ಟಗಿ: ‘ಜನರಲ್ಲಿ ಜೀವಂತವಾಗಿರುವ ಮೂಢನಂಬಿಕೆಗಳು ದೂರ ಸರಿಯಬೇಕಾದರೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆ ಜಾಗೃತಗೊಂಡಾಗ ಮಾತ್ರ ಸಾಧ್ಯ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ತಾಲ್ಲೂಕಿನ ಮಾದಾಪುರದಲ್ಲಿ ನಡೆದ ತುಲಾಭಾರ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದುಡಿಮೆಯಲ್ಲಿ ಬಳಕೆ ಮತ್ತು ಗಳಿಕೆ ಇವು ಸರಿಯಾದ ದಿಕ್ಕಿನಲ್ಲಿರಬೇಕು, ಆ ಸಂಬಂಧಗಳೇ ಆರ್ಥಿಕ ತತ್ವವಾಗಿರುತ್ತವೆ. ಕಾಯಕ ಪ್ರಜ್ಞೆಯೊಂದಿಗೆ ದುಡಿದುದರಲ್ಲಿ ನೀಡುವ ಮತ್ತು ಬೇಡದೇ ಇರುವವನು ಸಮಾಜದಲ್ಲಿ ಶ್ರೀಮಂತ ಎನಿಸಿಕೊಳ್ಳುತ್ತಾನೆ. ಸರಳ ಜೀವನ, ಶಿಕ್ಷಣದ ಪ್ರಗತಿ ಅಗತ್ಯ’ ಎಂದರು.

‘ಮನಸ್ಸು ದೇವರ ಮಾರ್ಗದರ್ಶನಕ್ಕೆ ಮೂಲ ಸಾಧನವಾಗಿರುತ್ತದೆ. ಮನ ಶುದ್ಧಗೊಳ್ಳದಿದ್ದರೆ ಭಕ್ತಿ ಫಲಪ್ರದವಾಗುವುದಿಲ್ಲ. ಬಾಹ್ಯದಲ್ಲಿ ಆಡಂಬರದ ಪೂಜೆ ಮಾಡಿ ಆಂತರಿಕ ಶುದ್ಧಿ ಮರೆಯುವುದರಿಂದ ಪ್ರಯೋಜನವೆ ಇಲ್ಲ. ಒಳ್ಳೆಯ ಚಿಂತನೆ, ಕಾಯಕ ತತ್ವ ಮತ್ತು ನಿಜಭಕ್ತಿಯ ಮೂಲಕ ಮನಸ್ಸನ್ನು ಶುದ್ಧಗೊಳಿಸುವುದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ’ ಎಂದು ವಿವರಿಸಿದರು.

ADVERTISEMENT

ಈ ಸಂದರ್ಭ ಸಿದ್ಧರಾಮೇಶ್ವರ ಸ್ವಾಮೀಜಿ ಅವರಿಗೆ ತುಲಾಭಾರ ಸೇವೆ ನಡೆಯಿತು.

ಕೊಳ್ಳಪ್ಪ ಗೌಂಡಿ, ಚಿದಾನಂದಪ್ಪ ನಿಂಬಪ್ಪ, ರಾಜಪ್ಪ ಮಹಾದೇವಪ್ಪ, ಯಲ್ಲಪ್ಪ ತಿಮ್ಮಪ್ಪ, ಶರಣಗೌಡ ಪಾಟೀಲ, ನಾಗನಗೌಡ ಪಾಟೀಲ, ನಾಗನಗೌಡ ಹುನಕುಂಟಿ, ರಾಮಣ್ಣ ಬೋದುರು ಮಹಾಂತೇಶ ನಾಡಗೌಡ, ವಕೀಲ ಸಿದ್ದಲಿಂಗೇಶ್ವರ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.