
ಕುಷ್ಟಗಿ: ತಾಲ್ಲೂಕು ಕೇಂದ್ರದಿಂದ ಬೇರೆ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳು ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಗಳ ಸುಸ್ಥಿತಿ ಬಗ್ಗೆ ನಿಗಾವಹಿಸಬೇಕಿರುವ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು ಕಂಡುಬಂದಿದೆ.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಇವು ರಸ್ತೆಗಳೊ ಹಳ್ಳಗಳೊ ಎಂಬಂತಾಗಿವೆ. ಗುಂಡಿಗಳು ಇರುವುದು ಗೊತ್ತಾಗದೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಸವಾರರಂತೂ ಮುಗ್ಗರಿಸುವುದು ಸಾಮಾನ್ಯವಾಗಿದೆ. ಜೀವ ಕೈಯಲ್ಲಿಡಿದು ವಾಹನ ಚಲಾಯಿಸುವಂತಹ ಅನಿವಾರ್ಯತೆ ಇದೆ.
ಎಲ್ಲೆಲ್ಲಿ ಸಮಸ್ಯೆ: ಲೋಕೋಪಯೋಗಿ ಇಲಾಖೆ ಕುಷ್ಟಗಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಗುಂಡಿಮಯವಾಗಿದೆ. ಸರ್ಕ್ಯೂಟ್ಹೌಸ್ ಆಸುಪಾಸಿನಲ್ಲಿ, ನೆರೆಬೆಂಚಿ ಗ್ರಾಮದ ಬಳಿ ಅನೇಕ ತಿಂಗಳ ಹಿಂದೆಯೇ ಗುಂಡಿಗಳು ನಿರ್ಮಾಣವಾಗಿವೆ. ರಾತ್ರಿ ಅಷ್ಟೇ ಅಲ್ಲ ಹಗಲಿನಲ್ಲಿ ವಾಹನ ಚಲಾಯಿಸುವುದೂ ಸವಾಲಿನ ಕೆಲಸವಾಗಿದೆ. ಇದೇ ಮಾರ್ಗದಲ್ಲಿ ಜಿಲ್ಲೆಯ ಅಧಿಕಾರಿಗಳು, ಸಚಿವರು, ಶಾಸಕರು ಹೀಗೆ ಪ್ರತಿಯೊಬ್ಬರೂ ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ ಗುಂಡಿಗಳನ್ನು ಮಾತ್ರ ಮುಚ್ಚುತ್ತಿಲ್ಲ.
‘ಹನುಮಸಾಗರ ಬದಾಮಿಗೆ ಸಂಪರ್ಕ ಕಲ್ಪಿಸುವ ಹನುಮಸಾಗರ ರಾಜ್ಯ ಹೆದ್ದಾರಿ ಪ್ರಮುಖ ರಸ್ತೆಗಳಲ್ಲೊಂದು. ತಳುವಗೇರಾ ಚಳಗೇರಾ ಮಧ್ಯೆ ಹದಗೆಟ್ಟು ಹೋಗಿದೆ. ಕಳೆದ ವರ್ಷವಷ್ಟೇ ರಸ್ತೆ ಅಭಿವೃದ್ಧಿಯಾಗಿದೆ. ಆದರೆ ರಸ್ತೆ ಕಿತ್ತುಹೋಗಿದ್ದು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಗುಣಮಟ್ಟದ ಕಾಮಗಾರಿ ನಡೆದಿದ್ದರೆ ರಸ್ತೆಗೆ ಈ ಸ್ಥಿತಿ ಬರುತ್ತಿರಲಿಲ್ಲ. ಸರ್ಕಾರಿ ಲೆಕ್ಕದಲ್ಲಿ ಕೋಟ್ಯಂತರ ಹಣ ಖರ್ಚಾದರೂ ರಸ್ತೆ ಸ್ಥಿತಿ ಮಾತ್ರ ಅಯೋಮಯವಾಗಿದೆ’ ಎನ್ನುತ್ತಾರೆ ತಳುವಗೇರಾದ ಬಸವರಾಜ ಪಾಟೀಲ.
ಇನ್ನು ಪಟ್ಟಣದಿಂದ ಸಿಂಧನೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಅತ್ಯಂತ ಪ್ರಮುಖವಾಗಿದೆ. ಈ ಮಾರ್ಗದಲ್ಲಿ ಲೆಕ್ಕಕ್ಕಿಲ್ಲದಷ್ಟು ರಸ್ತೆ ಉಬ್ಬು ಗಳಿರುವುದೇ ದೊಡ್ಡ ಕಿರಿಕಿರಿಯಾಗಿದೆ. ಇನ್ನು ಹಿರೇಮನ್ನಾಪುರ ಗ್ರಾಮದ ಮಧ್ಯೆಯೇ ರಸ್ತೆ ಹಳ್ಳದಂತೆ ಗೋಚರಿಸುತ್ತದೆ ಎಂದು ಗ್ರಾಮದ ವೀರಭದ್ರಗೌಡ ಬೇಸರಿಸಿದರು. ರಸ್ತೆ ಪಕ್ಕದಲ್ಲಿ ಕೆಲ ವರ್ಷಗಳ ಹಿಂದೆ ಚರಂಡಿ ನಿರ್ಮಿಸಲಾಗಿತ್ತು. ಆದರೆ ಮನೆ, ಅಂಗಡಿಯವರು ಚರಂಡಿ ಮುಚ್ಚಿಕೊಂಡಿದ್ದಾರೆ. ಹಾಗಾಗಿ ರಸ್ತೆಗೆ ಕೊಳಚೆ ನೀರು ಹರಿಯುತ್ತಿದೆ. ಈ ಬಗ್ಗೆ ಹೇಳಿದರೂ ಜನರು ಮಾತುಕೇಳದ ಸ್ಥಿತಿಗೆ ಬಂದಿದ್ದಾರೆ’ ಎಂದು ಕಳಕಪ್ಪ ಬಳೂಟಗಿ ಇತರರು ಅಸಮಾಧಾನ ಹೊರಹಾಕಿದರು.
ಗುಂಡಿಗಳನ್ನು ಮುಚ್ಚುವುದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸದ್ಯ ಗುಂಡಿಗಳಿಗೆ ವೆಟ್ಮಿಕ್ಸ್ ಹಾಕಿ ಸಂಚಾರಕ್ಕೆ ಮುಕ್ತವಾಗಿಸಲು ಕ್ರಮ ಕೈಗೊಳ್ಳಲಾಗುತ್ತದೆಸುಧಾಕರ ಕಾತರಕಿ ಎಇಇ ಲೋಕೋಪಯೋಗಿ ಇಲಾಖೆ
ರಸ್ತೆಯಲ್ಲಿ ಗುಂಡಿಬಿದ್ದು ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಬಂದಿದೆ. ಸಮಸ್ಯೆ ಕಣ್ಮುಂದೆ ಇದ್ದರೂ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಹನುಮಪ್ಪ ಗುರಿಕಾರ ನೆರೆಬೆಂಚಿ ಗ್ರಾಮಸ್ಥ
ಜೀವಹಾನಿಗೆ ಸರ್ಕಾರವೇ ಹೊಣೆ
ಗುಂಡಿ ಬಿದ್ದು ರಸ್ತೆಗಳು ಹಾಳಾಗಿವೆ ಎರಡು ವರ್ಷದ ಹಿಂದೆ ಕೊಪ್ಪಳ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋದ ಲಾರಿ ಚಾಲಕ ವಾಯುವಿಹಾರಕ್ಕೆ ಬಂದಿದ್ದ ವ್ಯಕ್ತಿಯ ಮೇಲೆಯೇ ಹರಿಸಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು. ‘ರಸ್ತೆ ಗುಂಡಿಳಿಂದಾಗುವ ಜೀವಹಾನಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಷ್ಟೇ ಅಲ್ಲ ಸೆಕ್ಷನ್ 80ರ ಸಿಪಿಸಿ 1 ಕಾಯ್ದೆಯಲ್ಲಿ ನೋಟಿಸ್ ನೀಡಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನೂ ಎದುರುದಾರರನ್ನಾಗಿಸಲು ಕಾನೂನಿನಲ್ಲಿ ಅವಕಾಶವಿದೆ’ ಎನ್ನುತ್ತಾರೆ ಇಲ್ಲಿಯ ವಕೀಲ ನಾಗಪ್ಪ ಸೂಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.