ಕಾರಟಗಿ: ‘ನಾನು ಆಂಜನೇಯಸ್ವಾಮಿಯ ಭಕ್ತನಾಗಿದ್ದರಿಂದ 3ನೇ ಬಾರಿ ಮಾಲೆ ಧರಿಸಿದ್ದೇನೆ. ಮಾಲೆ ಹಾಕಿರುವುದು ಡಂಬಾಚಾರ, ರಾಜಕೀಯ ಕಾರಣಕ್ಕಾಗಿ ಅಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಸಮೃದ್ದವಾದ ಮಳೆಯಾಗಿ, ಬೆಳೆಗಳು ಬೆಳೆದು ಜನರು ಸುಖದಿಂದ ಇರುವಂತಾಗಲಿ ಎಂದು ಸಂಕಲ್ಪ ಮಾಡಿ ಮಾಲೆ ಧರಿಸಿದ್ದೇನೆ. ನನ್ನೊಂದಿಗೆ ನಮ್ಮ 25ಕ್ಕೂ ಅಧಿಕ ಕಾರ್ಯಕರ್ತರು ಮಾಲೆ ಹಾಕಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಯರಡೋಣ ಮುರುಡಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ, ಗುರುಸ್ವಾಮಿಯವರಿಂದ ಮಾಲೆ ಧರಿಸಿದ ಬಳಿಕ ಅವರು ಮಾತನಾಡಿದರು.
5 ದಿನಗಳ ಬಳಿಕ ಹನುಮ ಜಯಂತಿ ದಿನದಂದು (ಏ. 23) ಅಂಜನಾದ್ರಿಯ ಆಂಜನೇಯ ಸನ್ನಿಧಿಯಲ್ಲಿ ಇರಮುಡಿ ಸಮರ್ಪಿಸಿ ಮಾಲೆಯನ್ನು ವಿರಮಣ ಮಾಡಲಾಗುವುದು ಎಂದು ಹೇಳಿದರು.
ಬಳಿಕ ವಾಸ್ತವ್ಯ ಮಾಡುವ ದೇವಿಕ್ಯಾಂಪ್ ದೇವಿ ಬೀರೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಸಚಿವರೊಂದಿಗೆ ಹನುಮ ಮಾಲೆ ಧರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಶಶಿಧರಗೌಡ ಪಾಟೀಲ್, ಸೋಮನಾಥ ದೊಡ್ಡಮನಿ, ಸತೀಶ್ ಮುಸ್ಟೂರ ಕ್ಯಾಂಪ್, ಶರಣಪ್ಪ ಕಡೇಮನಿ, ಸುರೇಶ್ ಸಿಂಗನಾಳ, ಸತ್ಯನಾರಾಯಣ ಜಂಗಮರ ಕಲ್ಗುಡಿ, ಶಿವಕುಮಾರ ಬಜಾರ್ ಬೂದಗುಂಪಾ, ಬಸವರಾಜ್ ಸಾಹುಕಾರ ಬೆನ್ನೂರು, ಹನುಮೇಶ್ ಗುರಿಕಾರ, ಬಸವರಾಜ ಗುಂಡೂರ, ಬಸವರಾಜ್ ಹಾಲಸಮುದ್ರ, ಯಮನೂರು ಸೋಮನಾಳ, ಅಮರೇಶ್ ಹಾಲಸಮುದ್ರ, ಉಮೇಶ್ ತಿಮ್ಮಾಪುರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.