ADVERTISEMENT

ಗಂಗಾವತಿ | ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗೆ ನೀಡಿ: ಶಾಸಕ ಜಿ.ಜನಾರ್ದನರೆಡ್ಡಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:52 IST
Last Updated 27 ಡಿಸೆಂಬರ್ 2025, 5:52 IST
ಗಂಗಾವತಿ ಆನೆಗೊಂದಿ ರಸ್ತೆಯಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯನ್ನು ಶುಕ್ರವಾರ ನಡೆ ಸಲಾಯಿತು.
ಗಂಗಾವತಿ ಆನೆಗೊಂದಿ ರಸ್ತೆಯಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯನ್ನು ಶುಕ್ರವಾರ ನಡೆ ಸಲಾಯಿತು.   

ಗಂಗಾವತಿ: ‘ಸರ್ಕಾರಿ ಉಪವಿಭಾಗ ಮತ್ತು ಹೆರಿಗೆ ಆಸ್ಪತ್ರೆಗೆ ಭೇಟಿ ನೀಡುವ ಜನರಿಗೆ ವೈದ್ಯರು ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರುವಂತಿಲ್ಲ’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ನಗರದ ಆನೆಗೊಂದಿ ರಸ್ತೆಯಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ಶುಕ್ರವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಗ್ರಾಮೀಣ ಭಾಗಗಳಿಂದ ತಾಲ್ಲೂಕು ಮಟ್ಟದ ಉಪವಿಭಾಗ ಆಸ್ಪತ್ರೆಗೆ ಹಾಗೂ ಹೆರಿಗೆ, ಮಕ್ಕಳ ಆಸ್ಪತ್ರೆಗೆ ಸಾಕಷ್ಟು ಜನರು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಸ್ಪಂದಿಸಿ, ಸೇವೆ ಮಾಡಬೇಕು. ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು’ ಎಂದರು.

ADVERTISEMENT

‘ಆಸ್ಪತ್ರೆಯ ಹೆಚ್ಚಿನ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ, ಅನುದಾನ ತರಲಾಗುತ್ತದೆ. ಸರ್ಕಾರದ ಅನುದಾನವಷ್ಟೇ ಅಲ್ಲದೆ ಖಾಸಾಗಿ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಕೆ ಮಾಡಿ ಆಸ್ಪತ್ರೆ ಅಭಿವೃದ್ಧಿಪಡಿಸಲಾಗುವುದು’ ಎಂದರು.

ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸ್ಮೀತಾ ಮಾತನಾಡಿ, ‘ಗಂಗಾವತಿ ತಾಲ್ಲೂಕಿನ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರವಾಸಿಗರ ಸಂಖ್ಯೆಯು ಹೆಚ್ಚುತ್ತಿದೆ. ಸದ್ಯ ಉಪವಿಭಾಗ ಆಸ್ಪತ್ರೆ 100 ಹಾಸಿಗೆ ಆಸ್ಪತ್ರೆಯಾಗಿದ್ದು, ಇದನ್ನು 150 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಅನುಮತಿ ದೊರೆತಿದೆ. ಆದರೆ ಜಾಗದ ಕೊರತೆ ಯಿಂದ ಕಾರ್ಯ ರೂಪಕ್ಕೆ ಬಂದಿಲ್ಲ’ ಎಂದರು.

‘ತಾಲ್ಲೂಕಿನಲ್ಲಿ ಖಾಸಗಿ ರಕ್ತ ಭಂಡಾರ ಮಾತ್ರ ಇವೆ. ಸರ್ಕಾರದಿಂದ ರಕ್ತ ಭಂಡಾರ ಕೇಂದ್ರ ನಿರ್ಮಾಣದ ಅವಶ್ಯಕತೆಯಿದೆ. ಜೊತೆಗೆ ಬೇರೊಂದು ಕೇಂದ್ರ ನಿರ್ಮಾಣಕ್ಕೆ ಕೆಕೆಆರ್‌ಡಿಬಿಗೆ ₹4 ಕೋಟಿ ಅನುದಾನ ನೀಡುವಂತೆ
ಪ್ರಸ್ತಾವನೆ ಸಲ್ಲಿಸಲಾಗಿದೆ. ವೈದ್ಯರ ವಸತಿ ನಿಲಯ ತುಂಬ ಹಳೆಯದಾಗಿದೆ. ಹೊಸ ವಸತಿ ನಿಲಯ ನಿರ್ಮಾಣಕ್ಕೆ ಕೆಕೆಆರ್‌ಡಿಬಿಗೆ ₹22 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಡಾ.ಈಶ್ವರ ಸವಡಿ, ಆರೋಗ್ಯ ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ, ಆಸ್ಪತ್ರೆ ವೈದ್ಯರಾದ ಡಾ.ಸೋಮಶೇಖರ, ಡಾ. ಚೇತನ, ಡಾ.ರಮೇಶ, ಡಾ. ವಿಜಯ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.