ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಕೃಷಿ ಬೆಳೆಗಳ ಸಮಗ್ರ ಮಾಹಿತಿ, ಮಳೆ ಪ್ರಮಾಣ, ಬಿತ್ತನೆ ಬೀಜ, ರೋಗ, ಕೀಟ ನಿಯಂತ್ರಣ, ಮಣ್ಣಿನ ಫಲವತ್ತತೆ ಹೆಚ್ಚುಸುವಿಕೆ ಸೇರಿ ಬೆಳೆ ಸಮೀಕ್ಷೆ ಕುರಿತು ಎರಡು ದಿನದ ಮುಂಗಾರು ಹಂಗಾಮಿನ ದ್ವೈಮಾಸಿಕ ಕಾರ್ಯಾಗಾರ ನಡೆಯಿತು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ‘ತುಂಗಭದ್ರಾ ಜಲಾಶಯಕ್ಕೆ ಹೊಳಹರಿವು ಹೆಚ್ಚಾಗಿದ್ದು, ನಾಳೆ ಕಾಲುವೆಗಳಿಗೆ ನೀರು ಹರಿಬಿಡಲಾಗುತ್ತಿದೆ. ಇದರಿಂದ ಗಂಗಾವತಿ, ಕಾರಟಗಿ, ರಾಯಚೂರು ಭಾಗದಲ್ಲಿ ಭತ್ತನಾಟಿ ಪ್ರಕ್ರಿಯೆ ಆರಂಭವಾಗಲಿದೆ. ಹಾಗಾಗಿ ಕೃಷಿ ವಿಜ್ಜಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಸಮನ್ವಯತೆಯಿಂದ ಭತ್ತ ನಾಟಿ, ಬೆಳೆ ಫಸಲು, ನಿರ್ವಹಣೆ, ಕೀಟ ಮತ್ತು ರೋಗಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಕೊಪ್ಪಳದ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಅವರು ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಕೊಪ್ಪಳ ಉಪಕೃಷಿ ನಿರ್ದೇಶಕ ಸಹದೇವ ಯರಗೊಪ್ಪ,ರಾಯಚೂರು ಕೃಷಿ ವಿವಿ ಸಹವಿಸ್ತರಣಾ ನಿರ್ದೇ ಶಕ ಡಾ.ಎಂ.ಆರ್ ಕುರುಬರ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ ಮಾತನಾಡಿದರು.
ನಂತರ ಕೃಷಿ ಅಧಿಕಾರಿಗಳು ಮುಂದಿನ ಎರಡು ತಿಂಗಳಲ್ಲಿ ಕೀಟ ರೋಗ ಪರಿವೀಕ್ಷಣಾ ತಂಡದೊಂದಿಗೆ ರೈತರ ಬೆಳೆಗಳಿಗೆ ಭೇಟಿ ನೀಡಿ, ಕೀಟ ನಿರ್ವಹಣೆ ಮತ್ತು ಬೆಳೆ ಫಸಲು ಬಗ್ಗೆ ಜಾಗೃತಿ ಮೂಡಿಸಲು ನಿರ್ಧಾರ ಮಾಡಿದರು
ಕೃಷಿ ವಿಜ್ಞಾನಿಗಳಾದ ಡಾ.ಪರಮೇಶ, ಡಾ.ಮಹಾಂತ ಶಿವಯೋಗಿ, ಡಾ.ಸುಜಯ ಉರುಳ, ಡಾ.ಜ್ಯೋತಿ, ಡಾ. ಕವಿತಾ ಉಳ್ಳಕಾಶಿ, ಡಾ.ರೇವತಿ ಸೇರಿ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳು, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.