ADVERTISEMENT

ಕೇಳದ ಹಲಗೆ ಸದ್ದು: ಕಾಣದ ಸಂಭ್ರಮ

ಸರ್ಕಾರದ ನಿಯಮ ಪಾಲನೆ: ಕನಕಗಿರಿ, ಕುಷ್ಟಗಿ, ಹನುಮಸಾಗರದಲ್ಲಿ ಸರಳವಾಗಿ ಮೊಹರಂ ಆಚರಿಸಿದ ಜನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 8:33 IST
Last Updated 31 ಆಗಸ್ಟ್ 2020, 8:33 IST
ಹನುಮಸಾಗರದಲ್ಲಿ ಮೊಹರಂ ಕೊನೆಯ ದಿನವಾದ ಭಾನುವಾರ ಸರಳ ರೀತಿಯಲ್ಲಿ ಅಲಾಯಿ ದೇವರುಗಳ ಮೆರವಣಿಗೆ ನಡೆಯಿತು
ಹನುಮಸಾಗರದಲ್ಲಿ ಮೊಹರಂ ಕೊನೆಯ ದಿನವಾದ ಭಾನುವಾರ ಸರಳ ರೀತಿಯಲ್ಲಿ ಅಲಾಯಿ ದೇವರುಗಳ ಮೆರವಣಿಗೆ ನಡೆಯಿತು   

ಕನಕಗಿರಿ: ತ್ಯಾಗ, ಬಲಿದಾನದ ಪ್ರತೀಕವಾಗಿರುವ ಹಿಂದೂ ಮುಸ್ಲಿಮರು ಸೇರಿ ಆಚರಿಸುವ ಮೊಹರಂ ಹಬ್ಬ ಈ ಸಲ
ಕಳೆಗುಂದಿದೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಮೊಹರಂ ಆಚರಣೆಗೆ ಹಲವು ನಿಯಮಗಳನ್ನು ವಿಧಿಸಿದೆ.

ಪಟ್ಟಣದ ಎಂಟು ಮಸೀದಿಗಳಲ್ಲಿ ಅಲಾಯಿ ದೇವರುಗಳನ್ನು ಪ್ರತಿಷ್ಠಾಪಿಸಿದ ನಂತರ ಇಮಾಮ್‌ ಕಾಸಿಂ ಹಾಗೂ ಲಾಲಸಾಬ ದೇವರ ಸವಾರಿನಡೆಯುತ್ತಿತ್ತು.

ADVERTISEMENT

ಖತ್ತಲ್ ರಾತ್ರಿ ಹಾಗೂ ಮೊಹರಂ ಕೊನೆ ದಿನ ಪ್ರತಿ ವರ್ಷ ಕಂಡು ಬರುತ್ತಿದ್ದ ಹಬ್ಬದ ವಾತಾವರಣ ಪಟ್ಟಣದಲ್ಲಿ ಶನಿವಾರ ಹಾಗೂ ಭಾನುವಾರ ಕಾಣಲಿಲ್ಲ. ಭಕ್ತರು ಸಪ್ಪೆ ಮುಖ ಹಾಕಿಕೊಂಡು ಸಂಭ್ರಮದ ಬಗ್ಗೆ ಮೆಲಕು ಹಾಕುತ್ತ ಕೊರಗುತ್ತಿರುವುದು ಕಂಡುಬಂತು.

ಮಸೀದಿಗಳ ಮುಂದೆ ಬೃಹತ್ ಪ್ರಮಾಣದಲ್ಲಿ ತೆಗೆಯುತ್ತಿದ್ದ ಅಲಾಯಿ ಕುಣಿಗಳಿಗೆ ಕಟ್ಟಿಗೆ ತುಂಡುಗಳನ್ನು ಹಾಕಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಆದರೆ ಅಲಾಯಿ ಕುಣಿ ತೆಗೆಯುವಂತಿಲ್ಲ ಎಂದು ಸರ್ಕಾರ ಸೂಚಿಸಿದ ಪ್ರಯುಕ್ತ ಕಟ್ಟಿಗೆ ಬಂಡೆಗಳನ್ನು ಎಳೆಯುವ ದೃಶ್ಯ ಈ ಸಲ ಕಾಣಲಿಲ್ಲ.

ದೀರ್ಘ ದಂಡ ನಮಸ್ಕಾರಕ್ಕೂ ಕೊಕ್ಕೆ: ಖತ್ತಲ್‌ ರಾತ್ರಿ ದಿನ ತಾವು ಬೇಡಿಕೊಂಡ ದೇವರ ಮಸೀದಿಯ ವರೆಗೆ ಹಲಗೆ, ತಮಟೆ ಹಾಗೂ ವಿವಿಧ ವಾದ್ಯಗಳೊಂದಿಗೆ ದೀರ್ಘ ದಂಡ ನಮಸ್ಕಾರ ಹಾಕಲು ಕೂಡ ನಿರ್ಬಂಧ ವಿಧಿಸಲಾಗಿದೆ. ಕಾರಣ ಯಾವ ಮಸೀದಿಯ ಮುಂದೆಯೂ ಹಲಗೆ ಸಪ್ಪಳಕೇಳಲಿಲ್ಲ.

ಮಸೀದಿಯಲ್ಲಿ ದೇವರನ್ನು ಕೂಡಿಸಿ ಅಲ್ಲಿಯೇ ಹೂ, ಲಾಡಿ, ಚಿಕ್ಕ ಮೂರ್ತಿಗಳಿಂದ ಅಲಂಕಾರಗೊಳಿಸಿ ಅಲ್ಲಿಯೆ ಧಪನ್ ಕಾರ್ಯ ನಡೆಸಲಾಯಿತು.

ಅಲಾಯಿ ಕುಣಿ ತೆಗೆಯುವ ಕೆಲಸ ಮಾಡದೆ ಸರ್ಕಾರದ ನಿಯಮಗಳನ್ನು ಪಾಲಿಸಿದ್ದೇವೆ ಎಂದು ಹಿರಿಯರಾದ ಯಮನಪ್ಪ ಆರೇರ್, ಶಾಮೀದಸಾಬ ಸೂಳೇಕಲ್, ಸೋಮಪ್ಪ ಕಮ್ಮಾರ, ಗೂಡುಸಾಬ ತಿಳಿಸಿದರು.

ಸರ್ಕಾರದ ನಿಯಮಗಳನ್ನು ಪಾಲಿಸಿ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿರುವುದನ್ನು ಸ್ವಾಗತಿಸಿ ಹಬ್ಬವನ್ನು ಸರಳವಾಗಿ ಆಚರಿಸಿದ್ದೇವೆ.

ದೇವರು ಕೂಡಿಸಿದ ಸ್ಥಳದಲ್ಲಿಯೇ ಧಪನ್ ಮಾಡಿದ್ದೇವೆ ಎಂದು ನಜೀರಹುಸೇನ, ಮೈಬೂಬಸಾಬ ಇತರೆ ಮಸೀದಿಗಳ ಆಡಳಿತ ಮಂಡಳಿ ಸದಸ್ಯರು ಪ್ರತಿಕ್ರಿಯೆ ನೀಡಿದರು ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸರಳ ರೀತಿಯಲ್ಲಿ ಆಚರಣೆ ಮಾಡಲಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪಿಎಸ್ಐ ಎಸ್. ಎಚ್. ಪ್ರಶಾಂತತಿಳಿಸಿದರು.

ಹೊಳೆಯಲ್ಲಿ ದೇವರ ದಫನ್‌
ಹನುಮಸಾಗರ:
ಹಿಂದೂ, ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಗುಡ್ಡದ, ಗಂಧದ ಮತ್ತು ಒಂಟಿ ಅಲಾಯಿ, ಕೊರವರ ದುರಗಪ್ಪನ ಅಲಾಯಿ ದೇವರುಗಳು ಒಂದೆಡೆ ಸೇರಿದ ಬಳಿಕ ಭಕ್ತರು ಪೂಜೆ ಸಲ್ಲಿಸಿದರು.

ಕೆಲವರು ಮನೆಯಲ್ಲಿ ಅಲಾಯಿ ದೇವರುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಎಲ್ಲ ಅಲಾಯಿ ದೇವರುಗಳು ಹೊಳೆಗೆ ಹೋಗುವ ಕಾರ್ಯಕ್ರಮ ಸರಳ ರೀತಿಯಲ್ಲಿಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.