ADVERTISEMENT

ಮುನಿರಾಬಾದ್ | ಶಂಕುಸ್ಥಾಪನೆಗೆ ‘ಕೈ’ ಕಾರ್ಯಕರ್ತರ ಅಡ್ಡಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:07 IST
Last Updated 6 ಜನವರಿ 2026, 3:07 IST
<div class="paragraphs"><p>ಮುನಿರಾಬಾದ್ ಸಮೀಪ ಹಿಟ್ನಾಳ–ಗಂಗಾವತಿ ರಸ್ತೆಯಲ್ಲಿ ಸೋಮವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೆರವೇರಿಸಿದರು.</p></div>

ಮುನಿರಾಬಾದ್ ಸಮೀಪ ಹಿಟ್ನಾಳ–ಗಂಗಾವತಿ ರಸ್ತೆಯಲ್ಲಿ ಸೋಮವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೆರವೇರಿಸಿದರು.

   

ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಸಮೀಪದ ಹಿಟ್ನಾಳ ಗ್ರಾಮದ ರೈಲ್ವೆ ಕ್ರಾಸಿಂಗ್ ಬಳಿ ಸೋಮವಾರ ಹಮ್ಮಿಕೊಂಡಿದ್ದ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಸದ, ಸಚಿವರು, ಶಾಸಕರ ಹೆಸರು ಕೈಬಿಟ್ಟಿದ್ದಾರೆ ಎಂದು ಆಕ್ಷೇಪಿಸಿ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪೂಜೆ ನೆರವೇರಿಸುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಕಾರ್ಯಕರ್ತರು, ಪೂಜೆಯ ಸ್ಥಳದಲ್ಲಿ ಮತ್ತು ವೇದಿಕೆ ಹಿಂಭಾಗದಲ್ಲಿ ಕಾಂಗ್ರೆಸ್‌ ಜನಪ್ರತಿನಿಧಿಗಳ ಹೆಸರು ಮತ್ತು ಭಾವಚಿತ್ರ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಈ ಬಗ್ಗೆ ಸೋಮಣ್ಣ ವಿಚಾರಿಸಿದಾಗ, ಶಂಕುಸ್ಥಾಪನೆಯ ಫಲಕದಲ್ಲಿ ಶಿಷ್ಟಾಚಾರದ ಪ್ರಕಾರ ಎಲ್ಲರ ಹೆಸರು ಇವೆ ಎಂದು ಅಧಿಕಾರಿಗಳು ಉತ್ತರಿಸಿದರು. ಬಳಿಕ ವೇದಿಕೆ ಏರಿದ ಸೋಮಣ್ಣ, ‘ರೈಲ್ವೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾವಚಿತ್ರ ಮಾತ್ರ ಇರುತ್ತದೆ. ಶಿಲಾಫಲಕದಲ್ಲಿ ಶಿಷ್ಟಾಚಾರದ ಪ್ರಕಾರ ಎಲ್ಲ ಹೆಸರುಗಳು ಇವೆ. ನಿಮ್ಮ ಜಿಲ್ಲೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ’ ಎಂದು ಮನವಿ ಮಾಡಿದರು.

ಸೋಮಣ್ಣ ಮಾತನಾಡುವ ಭರದಲ್ಲಿ, ‘ನಿಮ್ಮ ಪಟಾಲಂ ಕರೆದುಕೊಂಡು ಬಂದು ಗಲಾಟೆ ಮಾಡುತ್ತಿದ್ದೀರಿ, ಇದು ಒಳ್ಳೆಯದಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಕ್ಷೇಪ ವ್ಯಕ್ತಪಡಿಸಿದರು. ಇದರ ಮಧ್ಯೆ ತಳ್ಳಾಟ, ನೂಕಾಟ ಆರಂಭವಾಯಿತು. ಕೆಲವರು ವೇದಿಕೆ ಮುಂಭಾಗದಲ್ಲಿದ್ದ ಕುರ್ಚಿಗಳನ್ನು ಬಿಸಾಕಿದ ಕಾಂಗ್ರೆಸ್‌ ಕಾರ್ಯಕರ್ತರು ಸೋಮಣ್ಣ ಅವರ ಎದುರೇ ತೀವ್ರ ವಾಗ್ದಾಳಿ ನಡೆಸಿದರು.

ಶಿಲಾನ್ಯಾಸ ನೆರವೇರಿಸಿ ಹೋಗುತ್ತಿದ್ದ ವಿ.ಸೋಮಣ್ಣ ಅವರ ಮೇಲೆಯೂ ಕಾಂಗ್ರೆಸ್‌ ಕಾರ್ಯಕರ್ತರು ಕುರ್ಚಿ ಎಸೆಯಲು ಯತ್ನಿಸಿದರು. ಸಚಿವರ ಬಳಿ ಇದ್ದ ಅಂಗರಕ್ಷಕರು ಕುರ್ಚಿ ಸೋಮಣ್ಣ ಅವರ ಮೇಲೆ ಬೀಳುವುದನ್ನು ತಡೆಯುವ ಮೂಲಕ ಮುಂದೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಗೊಂದಲದ ಮಧ್ಯೆ ಶಿಲಾಫಲಕ ಅನಾವರಣಗೊಳಿಸಿ ಸೋಮಣ್ಣ ತೆರಳಿದರು. 

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಸದಸ್ಯ ಶಶಿಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದಢೇಸುಗೂರು, ಮುಖಂಡರಾದ ಬಸವರಾಜು ಕ್ಯಾವಟರ್, ಪ್ರದೀಪ ಪಲ್ಲೇದ, ಪ್ರಭುರಾಜ ಪಾಟೀಲ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎಚ್ ಸುನಿಲ್, ಮಹಿಳಾ ಕಾನ್‌ಸ್ಟೆಬಲ್‌ ಸೇರಿದಂತೆ 50ಕ್ಕೂ ಹೆಚ್ಚು ಜನ ಸಿಬ್ಬಂದಿ ಹಾಜರಿದ್ದರು. 

ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ಇಲ್ಲ ಎಂದು ಕಾರ್ಯಕರ್ತರ ಆಕ್ಷೇಪ

ನಿಮ್ಮ ಜಿಲ್ಲೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ

ಕಾರ್ಯಕರ್ತರ ಕೆರಳಿಸಿದ ಸಚಿವರ ಪದ ಬಳಕೆ

‘ಶೇ100ರಷ್ಟು ಕೇಂದ್ರದ ಅನುದಾನ’

‘ಮುನಿರಾಬಾದ್ ಮತ್ತು ಗಿಣಿಗೇರಿ ಮದ್ಯದ ಗೇಟ್ ಸಂಖ್ಯೆ 77ರ ಬದಲಾಗಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ₹27 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಒಂದು ನಯಾ ಪೈಸೆ ಕೂಡ ಇಲ್ಲ’ ಎಂದು ವಿ.ಸೋಮಣ್ಣ ಸ್ಪಷ್ಟಪಡಿಸಿದರು.

‘ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಮತ್ತು ಹಿಟ್ನಾಳ ಸಹೋದರರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವೇದಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪ್ರತಿಷ್ಠೆ ಬಿಟ್ಟು ಸಾರ್ವಜನಿಕ ಸೇವೆ ಮಾಡೋಣ. ನೀವು ಸಹಕಾರ ಕೊಡದಿದ್ದರೂ ಕಾಮಗಾರಿ ನಡೆದೇ ನಡೆಯುತ್ತದೆ. ಮೂರು ತಿಂಗಳಲ್ಲಿ ಮತ್ತೆ ಖುದ್ದಾಗಿ ಬಂದು ಕಾಮಗಾರಿ ಪರಿಶೀಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.