ADVERTISEMENT

ಕ್ವಾರಂಟೈನ್: ಹೊಸ ಮಾರ್ಗಸೂಚಿ

ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 14:50 IST
Last Updated 3 ಜೂನ್ 2020, 14:50 IST
 ಪಿ.ಸುನೀಲ್ ಕುಮಾರ್  
 ಪಿ.ಸುನೀಲ್ ಕುಮಾರ್     

ಕೊಪ್ಪಳ: ಭಾರತ ಗೃಹ ಮಂತ್ರಾಲಯದ ಆದೇಶದಂತೆ ಅಂತರ ರಾಜ್ಯ ಪ್ರಯಾಣಿಕರು ರಾಜ್ಯದೊಳಗೆ ಪ್ರವೇಶಿಸಿದ ನಂತರ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಕುರಿತು ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನದ ಅನ್ವಯ ಕ್ವಾರಂಟೈನ್‌ಗೆ ಒಳಪಡಿಸಲು ಕೆಲವು ವಿನಾಯಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿರುವವರನ್ನು ರೋಗ ಲಕ್ಷಣ ಇಲ್ಲದೆ ಇದ್ದ ಪಕ್ಷದಲ್ಲಿ ಅವರನ್ನು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಗೃಹ ಕ್ವಾರಂಟೈನ್ ಮಾಡಲಾಗುವುದು. ವಿಶೇಷ ಸಂದರ್ಭಗಳಲ್ಲಿ ರೋಗ ಲಕ್ಷಣ ಇಲ್ಲದೇ ಇರುವ ಪಕ್ಷದಲ್ಲಿ, ಕುಟುಂಬ ಸದಸ್ಯರು ಮೃತ ಹೊಂದಿದಲ್ಲಿ, ಗರ್ಭಿಣಿಯರು,10 ವರ್ಷದ ಕೆಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು, ಅಪಾಯದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ 14 ದಿನಗಳ ಕಾಲ ಗೃಹ ಕ್ವಾರಂಟೈನ್‌ನಲ್ಲಿ ಇಡಲಾಗುವುದು.

ಮಹಾರಾಷ್ಟ್ರ ರಾಜ್ಯ ಹೊರತು ಪಡಿಸಿ ಇತರೆ ರಾಜ್ಯಗಳಿಂದ ಆಗಮಿಸುವ ರೋಗ ಲಕ್ಷಣ ಇಲ್ಲದೇ ಇರುವ ವ್ಯಕ್ತಿಗಳನ್ನು 14 ದಿನಗಳ ಕಾಲ ಗೃಹ ಕ್ವಾರಂಟೈನ್‌ನಲ್ಲಿ ಇಡಲಾಗುವುದು.ರಾಜ್ಯದ ಗಡಿ ಭಾಗಗಳಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ಗಳ ಮೂಲಕ ಅನ್ಯ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳು ಜಿಲ್ಲೆಯ ನಗರ ಪ್ರದೇಶಗಳಿಗೆ ಬಂದು ವಾಸಿಸಿದ್ದಲ್ಲಿ, ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ಮನೆಯ ಅಕ್ಕ ಪಕ್ಕದ ವಾಸಿಗಳು ಸಂಬಂಧಪಟ್ಟ ಸ್ಥಳೀಯ ಆಡಳಿತಗಳ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ತಿಳಿಸಬೇಕು.

ADVERTISEMENT

ಅನ್ಯ ರಾಜ್ಯಗಳಿಂದ ಬರುವ ವ್ಯಕ್ತಿಗಳು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಬಂದು ವಾಸಿಸಿದ್ದಲ್ಲಿ ಮತ್ತು ಆ ವ್ಯಕ್ತಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ವ್ಯಕ್ತಿಗಳ ಮನೆಯ ಅಕ್ಕ ಪಕ್ಕದ ವಾಸಿಗಳು ಸಂಬಂಧಪಟ್ಟ ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಾ ಆರೋಗ್ಯಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಬೇಕು.

ಜಿಲ್ಲೆಯಲ್ಲಿ ಅನ್ಯ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಗ್ರಾಮೀಣ ಪ್ರದೇಶ ವಲಯದಲ್ಲಿ ಯುನಿಸೆಫ್‌ನ ಜಿಲ್ಲಾ ಸಮನ್ವಯ ಅಧಿಕಾರಿ ಹರೀಶ್ ಜೋಗಿ, ಮೊ: 9035129484 ಮತ್ತು ನಗರ ಪ್ರದೇಶ ವಲಯದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಮೊ: 9606729144 ಇವರನ್ನು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.