ಕನಕಗಿರಿ: ಅಕಾಲಿಕವಾಗಿ ಸುರಿದ ಧಾರಾಕಾರ ಮಳೆ ಹಾಗೂ ರಭಸವಾದ ಗಾಳಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಗದ್ದೆ, ತೋಟ ಹಾಗೂ ಹೊಲದಲ್ಲಿನ ಬೆಳೆ ನಷ್ಟವಾಗಿದೆ.
ತಾಲ್ಲೂಕಿನ ಜೀರಾಳ ಕಲ್ಗುಡಿ, ಚಿಕ್ಕಡಂಕನಲ್, ಹಿರೇ ಡಂಕನಕಲ್ ಗ್ರಾಮದಲ್ಲಿ ಬೆಳೆದ ಅಂದಾಜು 3000 ಎಕರೆ ಭತ್ತ ನಷ್ಟವಾಗಿದೆ. ಬೆಳೆಹಾನಿ ಸ್ಥಳಕ್ಕೆ ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬನಾ, ಉಪ ತಹಶೀಲ್ದಾರ್ ಪ್ರಕಾಶ ಸವಡಿ, ಕಂದಾಯ ನಿರೀಕ್ಷಕ ಗುರುರಾಜ ನೂಲ್ವಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸುಗೂರು ಮಾತನಾಡಿ,‘ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ತಕ್ಷಣವೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಪಟ್ಟಣದ ಪ್ರಗತಿಪರ ರೈತ ರುದ್ರಪ್ಪ ಬುಕನಕಟ್ಟಿ ಅವರ ತೋಟದಲ್ಲಿನ ಬಾಳೆ ಗಿಡಗಳು ನೆಲಕ್ಕೆ ಉರುಳಿ, ಅಪಾರ ನಷ್ಟವಾಗಿದೆ. ಗ್ರಾಮದ ಕನಕಪ್ಪ ಸಾಬಣ್ಣ ಅವರ ಹೊಲದಲ್ಲಿ ಬೆಳೆದ ಟೊಮೆಟೊ ಬೆಳೆ ಸಹ ಹಾನಿಗೆ ಒಳಗಾಗಿದೆ.
ಎರಡು ಹೊಲಗಳಿಗೂ ತಹಶೀಲ್ದಾರ್ ರವಿ ಅಂಗಡಿ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಯೋಗಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.