ADVERTISEMENT

ಬಜೆಟ್ 2021‌: ಜನ ಏನಂತಾರೆ?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 1:42 IST
Last Updated 2 ಫೆಬ್ರುವರಿ 2021, 1:42 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021-22ನೇ ಸಾಲಿನ ಬಜೆಟ್ ಕುರಿತು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಜನರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.

‘ಜನಪರ ಬಜೆಟ್‌’

ಬಜೆಟ್‌ನಲ್ಲಿ ಭಾರತ ಮಾಲಾ ಯೋಜನೆ ಅಡಿ ಬೆಳಗಾವಿಯಿಂದ ರಾಯಚೂರು ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆದ ಕುರಿತು ಘೋಷಣೆ ಮಾಡಲಾಗಿದೆ. ಇದು ಬೆಳಗಾವಿ, ಹುನಗುಂದ, ಲಿಂಗಸುಗೂರು ಹಾಗೂ ರಾಯಚೂರು ರಸ್ತೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗಲಿದೆ. ಇದು ರೈತ ಪರ, ಹಾಗೂ ಜನಪರ ಬಜೆಟ್ ಆಗಿದೆ. ನಗರ ಹಾಗೂ ಗ್ರಾಮೀಣ ಮೂಲಸೌಕರ್ಯ ಸೇರಿ ವಿವಿಧ ವಲಯಗಳಿಗೆ ಆದ್ಯತೆ ನಿಡಲಾಗಿದೆ

ADVERTISEMENT

- ಸಂಗಣ್ಣ ಕರಡಿ, ಸಂಸದ, ಕೊಪ್ಪಳ

***

‘ರೈತ ವಿರೋಧಿ ಬಜೆಟ್‌’

ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ರೈತ ವಿರೋಧಿಯಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿರುವುದು ಸರಿಯಲ್ಲ. ರಾಜ್ಯಕ್ಕೆ ಯಾವ ಯೋಜನೆಗಳನ್ನು ಘೋಷಿಸಿಲ್ಲ. ಅನ್ಯಾಯವಾಗಿದೆ

- ರೆಡ್ಡಿ ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡ, ಗಂಗಾವತಿ

***

‘ಉದ್ಯಮ ಸ್ನೇಹಿ ಬಜೆಟ್’

ಬಜೆಟ್‌ನಲ್ಲಿ ಉದ್ಯಮ ವಲಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಉತ್ಪಾದನಾ ವಲಯಕ್ಕೆ ಉತ್ತೇಜನೆ ನೀಡಲಾಗಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇದು ದೂರದೃಷ್ಟಿ ಇಟ್ಟುಕೊಂಡು ಮಂಡಿಸಿರುವ ಉದ್ಯಮ ಸ್ನೇಹಿ ಬಜೆಟ್‌ ಆಗಿದೆ

- ಶಿವರಾಜ ಯಲಿಗಾರ್, ಉದ್ಯಮಿ, ಗಂಗಾವತಿ

***

‘ಬಜೆಟ್ ತೃಪ್ತಿ ತಂದಿದೆ’

ಈ ಸಲದ ಕೇಂದ್ರ ಬಜೆಟ್ ತೃಪ್ತಿ ತಂದಿದೆ. ಬೆಂಗಳೂರು ನಗರದ ಮೆಟ್ರೊ ರೈಲು ಯೋಜನೆಗೆ ಅನುದಾನ ನೀಡಲಾಗಿದೆ. ಗೃಹ ಸಾಲಕ್ಕೆ ಸಂಬಂಧಿಸಿ ಹೆಚ್ಚಿನ ಅನುಕೂಲ ಒದಗಿಸಲಾಗಿದೆ

- ಮುತ್ತು ಮರಿಲಿಂಗಪ್ಪನವರ, ರಾಜುರು

***

‘ಸಂಕಷ್ಟಕ್ಕೆ ಸಿಲುಕಿಸಲಿದೆ’

ಪೆಟ್ರೋಲ್, ಡೀಸೆಲ್‌ಗಳ ಅಬಕಾರಿ ಸುಂಕ ಹೆಚ್ಚಳದಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳ ವಾಗಲಿದೆ. ಬಜೆಟ್‌ನಲ್ಲಿ ಸಾಮಾನ್ಯರ ಹಿತ ಕಾಯದಿರುವುದು ದುರಂತದ ಸಂಗತಿ

- ರಫಿ ಸಾಬ್ ಹಿರೇಹಾಳ, ಕುಕನೂರು

***

‘ನಿರಾಶಾದಾಯಕ ಬಜೆಟ್’

ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ. ರೈತ ವಿರೋಧಿ ಆಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಪರಿಹಾರ ನೀಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಮತ್ತಷ್ಟು ಹೆಚ್ಚಳವಾಗಿ. ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಿಲ್ಲ

- ವೀರೇಶ ಮಹಾಂತಯ್ಯನಮಠ, ಜೆಡಿಎಸ್ ಮುಖಂಡ

***

‘ಆಶಾದಾಯಕ ಬಜೆಟ್’

ಕೇಂದ್ರದ ಬಜೆಟ್‌ ಆಶಾದಾಯಕವಾಗಿದೆ. ರೈತರ ಹಾಗೂ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ. ಬೆಂಗಳೂರು ಮಹಾನಗರ ಹಾಗೂ ಇನ್ನುಳಿದ ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯ ಹೆಚ್ಚಿನ ಆದ್ಯತೆ ನೀಡಲಾಗಿದೆ.

- ಹಾಲಪ್ಪ ಆಚಾರ್, ಶಾಸಕ, ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.