ADVERTISEMENT

ಸೂಲಿಬೆಲೆಗೆ ದೇಶದ್ರೋಹಿ ಎಂದಿಲ್ಲ: ಸಚಿವ ಸದಾನಂದಗೌಡ ಸ್ಪಷ್ಟನೆ

ಕೇಂದ್ರದಿಂದ ಮತ್ತಷ್ಟು ಪರಿಹಾರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 12:23 IST
Last Updated 5 ಅಕ್ಟೋಬರ್ 2019, 12:23 IST
ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಶನಿವಾರ ಕೇಂದ್ರ ಸಚಿವ ಸದಾನಂದಗೌಡ ಭೇಟಿ ನೀಡಿದರು.
ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಶನಿವಾರ ಕೇಂದ್ರ ಸಚಿವ ಸದಾನಂದಗೌಡ ಭೇಟಿ ನೀಡಿದರು.   

ಗಂಗಾವತಿ: ಅನವಶ್ಯಕ ಮಾತು, ಸುಳ್ಳು ಸುದ್ದಿ ಹರಡುವವರಿಗೆ ದೇಶದ್ರೋಹಿ ಎಂದಿದ್ದೇನೆ ಹೊರತು ಚಕ್ರವರ್ತಿ ಸೂಲಿಬೆಲೆ ಅವರಿಗೆ ಹೇಳಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟನೆ ನೀಡಿದರು.

ಅವರು ಶನಿವಾರ ರಾಯಚೂರಿನ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಮನೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಿಯವರ ದೇಶಪ್ರೇಮದ ಬಗ್ಗೆ ಎರಡು ಮಾತಿಲ್ಲ. 25 ಜನ ಸಂಸದರು ಇದ್ದರೂ ಏನು ಮಾಡಿಲ್ಲಎನ್ನುವ ಮಾತು ಮನಸ್ಸಿಗೆ ನೋವು ಉಂಟು ಮಾಡಿತ್ತು.ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಗೆ ಕೇಂದ್ರ ಸರ್ಕಾರ 1,200 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ADVERTISEMENT

ದೇಶದ 9 ರಾಜ್ಯಗಳಲ್ಲಿ ನೆರೆ ಹಾವಳಿ ಸಂಭವಿಸಿದ್ದು, ಈ ಪೈಕಿ ರಾಜ್ಯಕ್ಕೆ ಮೊದಲು ಪರಿಹಾರ ನೀಡಿದೆ. ಪರಿಹಾರವನ್ನು ನೀಡಲು ಎರಡು ತಿಂಗಳು ತಡವಾಗಿದೆ ಎಂದಾದರೆ ಮಳೆಯು ನಿಂತ ಮೇಲೆ ಪರಿಹಾರ ಬಳಕೆಯಾಗುತ್ತದೆ. ಮಳೆ ಬರುವ ವೇಳೆಯಲ್ಲಿ ಪರಿಹಾರದ ಹಣ ಯಾವುದಕ್ಕೂ ಉಪಯೋಗವಾಗುವುದಿಲ್ಲ. ನಿರಂತರ ಮಳೆ ಮುಂದುವರೆದಿದ್ದರಿಂದ ಪರಿಹಾರ ಘೋಷಣೆ ಮಾಡಿರಲಿಲ್ಲ. ಇದೆಲ್ಲವನ್ನು ಅರ್ಥ ಮಾಡಿಕೊಂಡು ಟೀಕೆ ಮಾಡಬೇಕು ಎಂದು ಹೇಳಿದರು.

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ನೀಡಿರುವುದು ಪಕ್ಷದ ಆಂತರಿಕ ವಿಚಾರ. ಬಿಟ್ಟಿರುವ ವಿಚಾರ.ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದರೆ ಯಾರೇ ಆಗಲಿ, ಪಕ್ಷದ ಶಿಸ್ತು ಸಮಿತಿ ಅವರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಅನಂತಕುಮಾರ್ ನಿಧನದ ಬಳಿಕ ರಾಜ್ಯದ ಸಚಿವರು ಕೇಂದ್ರ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿಲ್ಲ ಎನ್ನುವ ವಿಚಾರಕ್ಕೆ ನಾನು ಏನುಹೇಳಲು ಇಷ್ಟಪಡುವುದಿಲ್ಲ. ಕಳೆದ ಎರಡು ದಿನಗಳ ಹಿಂದೆ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿವರನ್ನು ಭೇಟಿಯಾಗಿದ್ದೇನೆ. ಒಂದೇ ದಿನದಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ. ಇದೆಲ್ಲ ನಮ್ಮ ಕರ್ತವ್ಯ, ಇದರಲ್ಲಿ ಶಹಬ್ಬಾಸಗಿರಿ ತೆಗೆದುಕೊಳ್ಖುವುದು ಏನೂ ಇಲ್ಲ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ್, ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ಹನುಮಂತಪ್ಪ ನಾಯಕ, ಉಮೇಶ ಸಿಂಗನಾಳ, ಯಮನೂರ ಚೌಡ್ಕಿ, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.