ತಾವರಗೇರಾ: ‘ಇಸ್ಪೀಟ್, ಕುಡಿತ, ಜೂಜಾಟದಂತಹ ಚಟಗಳನ್ನು ಮಾಡುವವರನ್ನು ಸರಿದಾರಿಗೆ ತರುವ ಹಿನ್ನೆಲೆಯ ಸದ್ಭಾವನಾ ಯಾತ್ರೆ ಮಾಡುವ ಆಲೋಚನೆ ಇದೆ. ಆದ್ದರಿಂದ ಪಟ್ಟಣದ ಸರ್ವ ಸಮುದಾಯದವರು ಸಹಕಾರ ಮತ್ತು ಸದ್ಗುಣದ ಮೂಲಕ ಯಶಸ್ವಿಗೊಳಿಸಬೇಕಿದೆ.ಆದ್ದರಿಂದ ಯಾವ ರೀತಿ ಕಾರ್ಯಕ್ರಮ ಮಾಡಬೇಕು.ಯಾವ ದಿನದಿಂದ ಪ್ರಾರಂಭ ಮಾಡಬೇಕು ಎಂದು ಸಲಹೆ ನೀಡಿ’ ನಿಡಶೇಸಿ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸದ್ಭಾವನಾ ಯಾತ್ರೆ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಪ್ರತಿ ನಿತ್ಯ ಸಂಜೆ ಆಧ್ಯಾತ್ಮಿಕ ಪ್ರವಚನ,ಬೆಳಿಗ್ಗೆ ಮನೆಮನೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವದು. ಕನಿಷ್ಠ 21 ದಿನಗಳು ಬೇಕಾಗುವದು. ಆದ್ದರಿಂದ ಇಂತಹ ವಿಶೇಷ ಯಾತ್ರೆಗೆ ಪ್ರಮುಖರು ಸಮಿತಿಗಳನ್ನು ಮಾಡಿಕೊಂಡು ಯಶಸ್ವಿಗೊಳಿಸಬೇಕು’ ಎಂದರು.
ನಂತರ ಪ್ರಮುಖರಾದ ಶ್ಯಾಮೀದಸಾಬ ದೋಟಿಹಾಳ ಮಾತನಾಡಿದರು.
ಜುಲೈ11ರ ನಂತರ ಯಾತ್ರೆ ಮತ್ತು ಪ್ರವಚನ ಕಾರ್ಯಕ್ರಮ ಮಾಡಲು ಸೂಕ್ತ ಸಮಯ. ಆದ್ದರಿಂದ ಮತ್ತೊಮ್ಮೆ ಜು.8ರಂದು ಪೂರ್ವಭಾವಿ ಈ ಸಭೆ ಕರೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ಸಮಾಜದ ಪ್ರಮುಖರು, ಯುವಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.