ಬಂಧನ
(ಸಾಂದರ್ಭಿಕ ಚಿತ್ರ)
ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಪ್ರವಾಸಿ ತಾಣ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಮತ್ತು ಸ್ಥಳೀಯ ಹೋಮ್ ಸ್ಟೇ ಒಡತಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಮಲ್ಲೇಶ ದಾಸರ ಮತ್ತು ಚೇತನಸಾಯಿ ಕಾಮೇಶ್ವರ ರಾವ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ನಾಪತ್ತೆಯಾಗಿದ್ದ ಒಡಿಶಾದ ಪ್ರವಾಸಿಗ ಬಿಬಾಶ್ (26) ಮೃತದೇಹ ಶನಿವಾರ ಮಲ್ಲಾಪುರ ಗ್ರಾಮದ ಪವರ್ ಹೌಸ್ ಗೇಟ್ ಬಳಿ ಪತ್ತೆಯಾಗಿದೆ.
‘ನಮ್ಮ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಇಸ್ರೇಲ್ ಹಾಗೂ ಹೋಂ ಸ್ಟೇ ಮಾಲಕಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳು ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಗೆ ಕೊಲೆ ಹಾಗೂ ಸುಲಿಗೆ ಮಾಡುವ ಉದ್ದೇಶವಿರಲಿಲ್ಲ ಎನ್ನುವುದು ಗೊತ್ತಾಗಿದ್ದು, ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರುವ ಶಂಕೆಯಿದೆ. ಅವರಿಗೆ ಅಪರಾಧದ ಹಿನ್ನೆಲೆ ಇದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ.
ಆಗಿದ್ದೇನು: ತುಂಗಭದ್ರಾ ನದಿಯ ಕಾಲುವೆಯ ಪಕ್ಕದ ರಸ್ತೆಯಲ್ಲಿ ರಾತ್ರಿ ವೇಳೆ ಕುಳಿತು ನಕ್ಷತ್ರಗಳನ್ನು ನೋಡುತ್ತ ಪ್ರಕೃತಿ ಅಸ್ವಾದಿಸುವುದು ಸಾಣಾಪುರ ಭಾಗದಲ್ಲಿ ಸಾಮಾನ್ಯ.
ಅದರಂತೆ ಇಸ್ರೇಲ್, ಅಮೆರಿಕ, ಮಹಾರಾಷ್ಟ್ರ, ಒಡಿಶಾ ಪ್ರವಾಸಿಗರು ಸ್ಥಳೀಯ ಹೋಂ ಸ್ಟೇಯೊಂದರ ಒಡತಿ ಜೊತೆ ಗುರುವಾರ ರಾತ್ರಿ ಕುಳಿತು ಗಿಟಾರ್ ಬಾರಿಸುತ್ತಿದ್ದರು. ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಮೊದಲು ಹಣದ ಬೇಡಿಕೆಯಿಟ್ಟಿದ್ದರು. ಹಣ ನೀಡದ ಕಾರಣಕ್ಕೆ ಜಗಳವಾಗಿದ್ದು ಒಡಿಶಾದ ಬಿಬಾಶ್ನನ್ನು ಕಾಲುವೆಯಲ್ಲಿ ನೂಕಿ ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.