
ಹನುಮಸಾಗರ: ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಿತ್ತೂರರಾಣಿ ಚನ್ನಮ್ಮ ವೃತ್ತದ ಸಮೀಪದಲ್ಲಿರುವ ರಾಘವೇಂದ್ರ ಸ್ವೀಟ್ಸ್ ಅಂಗಡಿಯಲ್ಲಿ ₹10 ಸಾವಿರ ನಗದು ಹಾಗೂ ಗುಟಕಾ ಚೀಟ್ಗಳನ್ನು ಕಳವು ಮಾಡಲಾಗಿದೆ. ಇದೇ ಸಾಲಿನಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಮೆಡಿಕಲ್ ಸ್ಟೋರ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು ₹30 ಸಾವಿರ ನಗದು ಹಾಗೂ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನೂ ಕಳವು ಮಾಡಿದ್ದಾರೆ.
ಕಳ್ಳತನದ ದೃಶ್ಯಗಳು ಅಂಗಡಿಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಭಾಗಿಯಾಗಿರುವುದು ದೃಢಪಟ್ಟಿದೆ.
ಇದೇ ಅಂಗಡಿ ಪಕ್ಕದಲ್ಲಿರುವ ಬಟ್ಟೆ ಅಂಗಡಿಯ ಕಳ್ಳತನಕ್ಕೆ ಯತ್ನಿಸಲಾಗಿದೆ. ಅಂಗಡಿ ಮೇಲೆ ಮನೆ ಇರುವುದರಿಂದ ಶಬ್ದ ಕೇಳಿ ಮಾಲೀಕರು ಕೆಳಗೆ ಬರುವುದನ್ನು ಗಮನಿಸಿದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಪೊಲೀಸ್ ಪಟ್ರೋಲಿಂಗ್ ಹೆಚ್ಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.