ಕೊಪ್ಪಳ: ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಉಲ್ ಫಿತ್ರ್ ಅನ್ನು ಸೋಮವಾರ ಕೊಪ್ಪಳದಲ್ಲಿ ಸರಳವಾಗಿ ಆಚರಿಸಲಾಯಿತು.
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆ, ಮಹಡಿ, ವಠಾರಗಳಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದರು.
ಮಕ್ಕಳು, ವೃದ್ಧರು ಹೀಗೆ ಯಾವುದೇ ವಯಸ್ಸಿನ ಭೇದವಿಲ್ಲದೆ ಕುಟುಂಬ ಸದಸ್ಯರೆಲ್ಲರೂ ಸರಳವಾಗಿ ಪ್ರಾರ್ಥನೆ ಸಲ್ಲಿಸಿದ್ದು ನಗರದಲ್ಲಿ ಕಂಡುಬಂತು.
ಈ ಬಾರಿ ಹಬ್ಬದ ಹಿಂದಿನ ದಿನ ಖರೀದಿ ಅಷ್ಟಾಗಿ ನಡೆಯಲಿಲ್ಲ. ಲಾಕ್ಡೌನ್ನಿಂದಾಗಿ ಹೆಚ್ಚಿನ ಜನರು ಖರೀದಿಗೆ ರಸ್ತೆಗೆ ಇಳಿಯಲಿಲ್ಲ. ಕೊರೊನಾ ಸೋಂಕಿನ ಭಯದಿಂದ ಜನರಲ್ಲಿ ಹೆಚ್ಚು ಆಸಕ್ತಿಯೂ ಕಂಡು ಬರಲಿಲ್ಲ.
ಪ್ರತಿ ವರ್ಷ ಬೆಳಿಗ್ಗೆ 10 ಗಂಟೆ ಒಳಗೆ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಗುತ್ತಿತ್ತು. ಪ್ರಾರ್ಥನೆ ಬಳಿಕ ಮನೆಗಳಿಗೆ ತೆರಳಿ, ವಿಶೇಷ ಖಾದ್ಯ 'ಶೀರ್ ಖುರ್ಮಾ' ಸೇವಿಸಿ, ಹಿರಿಯರ ಆಶೀರ್ವಾದ ಪಡೆದು, ಸ್ನೇಹಿತರಿಗೆ, ಹಿತೈಶಿಗಳಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಲು ತೆರಳಲಾಗುತ್ತಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಇದ್ಯಾವುದು ನಡೆಯಲಿಲ್ಲ.
ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವ ಸಲುವಾಗಿ ರಾಜಕಾರಣಿಗಳು, ಮುಖಂಡರು ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಮರಿಗೆ ಹಬ್ಬದ ಶುಭಾಶಯ ತಿಳಿಸಿದರು.
ಕೆಲ ಯುವಕರು ಕಾರು, ಬೈಕ್ಗಳಲ್ಲಿ ಸಂಚರಿಸಿ ಸ್ನೇಹಿತರಿಗೆ ಶುಭಾಶಯ ತಿಳಿಸಿದರು. ಹೆಚ್ಚಿನವರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.